ಕಾರು ಅಪಘಾತ: ನಟ ಪುನೀತ್ ರಾಜ್ ಕುಮಾರ್ ಪ್ರಾಣಾಪಾಯದಿಂದ ಪಾರು

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಪುನೀತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಳ್ಳಾರಿಯಲ್ಲಿ `ನಟಸಾರ್ವಭೌಮ` ಚಿತ್ರದ ಶೂಟಿಂಗ್ ಮುಗಿಸಿ ಹಿಂದಿರುಗುತ್ತಿದ್ದಾಗ ಗುರುವಾರ ರಾತ್ರಿ 9.30ರ ಸುಮಾರಿಗೆ ಆಂಧ್ರ ಪ್ರದೇಶದ ಅನಂತಪುರ ಸಮೀಪದಲ್ಲಿ ಕಾರಿನ ಟಯರ್ ಬ್ಲಾಸ್ಟ್ ಆಗಿ ಮೂರು ರಸ್ತೆಗಳ ತಿರುವು ಗೊತ್ತಾಗದೇ ಇರುವ ಕಾರಣ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನ ಹೆಡ್ ಲೈಟ್ ಬಳಿ ಬಂಪರ್ ಗೆ  ಹಾನಿಯಾಗಿದೆ.

ಪುನೀತ್ ರಾಜ್‍ ಕುಮಾರ್ ಹಾಗೂ ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪುನೀತ್ ರಾಜ್‍ ಕುಮಾರ್ ಜೊತೆ ಗನ್ ಮ್ಯಾನ್ ಹಾಗೂ ಕಾರಿನ ಚಾಲಕರಿದ್ದರು. ಈ ಘಟನೆ ನಂತರ ಪುನೀತ್ ಮತ್ತು ಸ್ನೇಹಿತರು ಅದೇ ಮಾರ್ಗದಲ್ಲಿ ಬರುತ್ತಿದ್ದ ಪರಿಚಯಸ್ಥರೊಬ್ಬರ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದಾರೆ.

ಈ ಅಪಘಾತ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ತೀವ್ರ ಆತಂಕಕ್ಕೀಡಾಗಿದ್ರು. ಹೀಗಾಗಿ ತಡರಾತ್ರಿ ಸದಾಶಿವನಗರ ನಿವಾಸಕ್ಕೆ ಆಗಮಿಸ್ತಿದ್ದಂತೆ ಪ್ರತಿಕ್ರಿಯಿಸಿದ ಪುನೀತ್, ನನಗೆ ಏನೂ ಆಗಿಲ್ಲ. ಚೆನ್ನಾಗಿಯೇ ಇದ್ದೇನೆ. ಕಾರಿನ ಟಯರ್ ಸ್ಫೋಟಗೊಂಡಿದೆ ಅಷ್ಟೇ. ಯಾರಿಗೂ ಏನೂ ಆಗಿಲ್ಲ. ನನ್ನ ಬಗ್ಗೆ ಕಾಳಜಿ ತೋರಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ