ಯುವ ನಟರಾಗಿದ್ದ ಅನಿಲ್ ಹಾಗೂ ಉದಯ್ ದುರಂತ ಸಾವು ಪ್ರಕರಣ ಹಿನ್ನಲೆ: ನಿರ್ಮಾಪಕ ಸುಂದರ್ ಗೌಡ ಪರಾರಿಯಾಗಲು ಸಹಾಯ ಮಾಡಿದ್ದ ನಟ ದುನಿಯಾ ವಿಜಯ್ ಬಂಧನ

ಬೆಂಗಳೂರು:ಜೂ-7: ಯುವ ನಟರಾಗಿದ್ದ ಅನಿಲ್ ಹಾಗೂ ಉದಯ್ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಪರಾರಿಯಾಗಲು ಸಹಾಯ ಮಾಡಿದ್ದ ಆರೋಪದ ಮೇಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹಿನ್ನಲೆಯಲ್ಲಿ ನಟ ದುನಿಯಾ ವಿಜಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಪರಾರಿಯಾಗಿದ್ದ ದುನಿಯಾ ವಿಜಯ್ ಅವರನ್ನು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.

ವಿಜಯ್ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯ ಟವರ್ ಲೊಕೇಷನ್ ಆಧರಿಸಿ ಪೊಲೀಸರು ಕಾರ್ಯಚರಣೆ ನಡೆಸಿ ಅವರು ಇರುವ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ಸುಂದರ್ ಪಿ ಗೌಡ ಬಂಧನಕ್ಕೆ ಪೊಲೀಸರು ತೆರಳಿದ್ದಾಗ ತಾವರೆಕರೆ ಪೊಲೀಸರಿಗೆ ಅಡ್ಡಿಪಡಿಸಿದ ಕಾರಣ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಿಜಯ್ ಮೇಲೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ನಾಪತ್ತೆಯಾಗಿದ್ದರು.

ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಂದ ದುನಿಯಾ ವಿಜಿಗಾಗಿ ತೀವ್ರ ಹುಡುಕಾಟ ನಡೆದಿತ್ತು. ಅಲ್ಲದೇ ವಿಶೇಷ ತಂಡವನ್ನು ರಚಿಸಲಾಗಿತ್ತು. ಎಫ್ ಐ ಆರ್ ದಾಖಲಾಗುತ್ತಿದ್ದಂತೆ ವಿಜಯ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ತಮಿಳುನಾಡಿನ ರೆಸಾರ್ಟ್ ವೊಂದರಲ್ಲಿ ದುನಿಯಾ ವಿಜಯ್ ಇದ್ದರೆಂದು ತಿಳಿದುಬಂದಿತ್ತು. ಬಂಧನ ಭೀತಿಯಲ್ಲಿದ್ದ ವಿಜಯ್ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದರು.
ಕೊರ್ಟ್‌ ಇಂದು ಅರ್ಜಿಯ ಕುರಿತು ತೀರ್ಪನ್ನು ಕಾಯ್ದಿರಿಸಿತ್ತು. ಕೋರ್ಟ್‌ ತೀರ್ಪಿಗೂ ಮುನ್ನವೇ ಪೊಲೀಸರು ವಿಜಯ್‌ ಅವರನ್ನು ಬಂಧಿಸಿದ್ದು, ಬೆಂಗಳೂರಿಗೆ ಕರೆ ತರುತ್ತಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ