ಕರ್ನಾಟಕ ಸೇರಿ ದೇಶದ 5 ರಾಜ್ಯಗಳಲ್ಲಿ ಭಾರೀ ಮಳೆ ಹಿನ್ನಲೆ: ಪ್ರವಾಹದ ಮುನ್ಸೂಚನೆ, ಹೈ ಅಲರ್ಟ್ ಘೋಷಿಸಿದ ಕೇಂದ್ರ

ನವದೆಹಲಿ:ಜೂ-7: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಸೇರಿದಂತೆ 5 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪ್ರವಾಹದ ಎಚ್ಚರಿಕೆ ನೀಡಿದೆ.

ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪ್ರವಾಹ ಎಚ್ಚರಿಕೆ ನೀಡಿದೆ.

ಕರ್ನಾಟಕದ ಕರಾವಳಿ ಮತ್ತು ಕೊಂಕಣ ಗೋವಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಕೊಂಕಣ, ಗೋವಾ ಮತ್ತು ಮಹಾರಾಷ್ಟ್ರದ ಕೇಂದ್ರೀಯ ಪ್ರದೇಶಗಳಲ್ಲಿ ಜೂನ್7-12ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಜನಸಂಪನ್ಮೂಲ ಸಚಿವಾಲಯಕ್ಕೆ ಎಚ್ಚರಿಕೆಗಳನ್ನು ನೀಡಿದೆ.

ಕರ್ನಾಟಕ ರಾಜ್ಯದಾದ್ಯಂತ ಜೂನ್.9 ಮತ್ತು ಜೂನ್11, ಕೇರಳ ರಾಜ್ಯದಲ್ಲಿ ಜೂನ್9 ಮತ್ತು 10ರಂದು ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ಪುಣೆ ಜಿಲ್ಲೆಯ ಕೆಲವು ಭಾಗಗಳಲ್ಲಿ ವರುಣ ತೀವ್ರವಾಗಿ ಆರ್ಭಟಿಸಲಿದ್ದಾರೆ. ಭಾರೀ ಮಳೆಯಿಂದಾಗಿ ಕರಾವಳಿ, ಕೊಂಕಣ ಗೋವಾ ಮತ್ತು ಮುಂಬೈಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳಿವೆ.

ದಕ್ಷಿಣ ನೈರುತ್ಯ ಮಾರುತವು ಕರ್ನಾಟಕ ದಕ್ಷಿಣ ಒಳನಾಡಿನ ಇನ್ನಷ್ಟು ಭಾಗಗಳು, ರಾಯಲಸೀಮೆಯ ಬಹುತೇಕ ಭಾಗ, ಆಂಧ್ರಪ್ರದೇಶ ದಕ್ಷಿಣ ಕರಾವಳಿ ಮತ್ತು ಬಂಗಾಳ ಕೊಲ್ಲಿಯ ಕೇಂದ್ರ ಪಶ್ಚಿಮ ಭಾಗಗಳು, ಬಂಗಾಳಕೊಲ್ಲಿಯ ಕೇಂದ್ರ ಪೂರ್ವದ ಉಳಿದ ಪ್ರದೇಶಗಳು ಹಾಗೂ ಈಶಾನ್ಯದ ಇನ್ನಷ್ಟು ಭಾಗಗಳಲ್ಲಿ ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.

ಕೇಂದ್ರ ಅರೇಬಿಯನ್ ಸಮುದ್ರ, ದಕ್ಷಿಣ ಕೊಂಕಣ ಮತ್ತು ಗೋವಾದ ಮತ್ತಷ್ಟು ಭಾಗಗಳಲ್ಲಿ ಕರ್ನಾಟಕ ಮತ್ತು ರಾಯಲಸೀಮೆಯ ಉಳಿದ ಭಾಗಗಳಲ್ಲಿ, ತೆಲಂಗಾಣದ ಕೆಲವು ಭಾಗಗಳಲ್ಲಿ, ಆಂಧ್ರ ಕರಾವಳಿ ಹಾಗೂ ಬಂಗಾಳ ಕೊಲ್ಲಿಯ ಪಶ್ಚಿಮ ಕೇಂದ್ರದ ಮತ್ತಷ್ಟು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ನೈರುತ್ಯ ಮಾರುತಗಳು ಬಲಗೊಳ್ಳುವ ಪರಿಸ್ಥಿತಿ ಪೂರಕವಾಗಿದೆ.

ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಕರಾವಳಿಯ ಮತ್ತಷ್ಟು ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ನೈರುತ್ಯ ಮಾರುತಗಳು ಮಳೆಗೆ ಪೂರಕವಾಗುವ ನಿಟ್ಟಿನಲ್ಲಿ ಪ್ರಬಲವಾಗಲಿವೆ.
ದೇಶದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ರಾಜ್ಯ ವಿಪತ್ತು ಪರಿಹಾರ ಘಟವು ಹಲವೆಡೆ ಹೈ ಅಲರ್ಟ್ ಘೋಷಣೆ ಮಾಡಿದೆ. ಯಾವುದೇ ರೀತಿಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧವಾಗಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ