
ನವದೆಹಲಿ, ಜೂ.5-ನಾನೂ ಕೂಡ ಸಚಿವ ಆಕಾಂಕ್ಷಿ. ಸೇವಾ ಹಿರಿತನ, ಪಕ್ಷಸಂಘಟನೆ, ಸಮುದಾಯದ ಆಧಾರದ ಮೇಲೆ ಪಕ್ಷ ನನ್ನನ್ನು ಪರಿಗಣಿಸುತ್ತದೆ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ನಲ್ಲಿದ್ದೇನೆ. ಕುರುಬ ಸಮುದಾಯವನ್ನು ಪ್ರತಿನಿಧಿಸುತ್ತಿದ್ದೇನೆ. ಅಲ್ಲದೆ, ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ. ಚನ್ನಪಟ್ಟಣದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 5 ಸಾವಿರ ಮತ ಗಳಿಸಿತ್ತು, ಆದರೆ ಈ ಬಾರಿ 35 ಸಾವಿರ ಮತ ಗಳಿಸಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನನಗೇ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದೇನೆ. ನಮ್ಮ ಸಮುದಾಯದ ಎಂ.ಟಿ.ಬಿ.ನಾಗರಾಜ್,ಭೆರತಿ ಬಸವರಾಜ್, ಭೆರತಿ ಸುರೇಶ್ ಮುಂತಾದ ಶಾಸಕರಿದ್ದಾರೆ. ಇವರೆಲ್ಲರಿಗೂ ನಾನು ಹಿರಿಯ. ಹೀಗಾಗಿ ನನಗೇ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಮುಖಂಡರು ಹೈಕಮಾಂಡ್ ವರಿಷ್ಠರೊಂದಿಗೆ ಈ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದರು.