
ಶಿರಸಿ:
ಕನ್ನಡದ ಪ್ರಥಮ ರಾಜಧಾನಿ ಹಾಗೂ ಕರ್ನಾಟಕದ ಪ್ರಾಚೀನ ಪಟ್ಟಣ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದ ಬನವಾಸಿಯಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು.ಈಗ್ಗೆ ಕೆಲವು ವರ್ಷಗಳ ಹಿಂದೆ ಇದರ ಬಗ್ಗೆ ಸರ್ಕಾರ ಆಲೋಚನೆ ಮಾಡಿತ್ತು ಆದರೆ ಆ ಪ್ರಕ್ರಿಯೆ ಅಲ್ಲಿಗೆ ನಿಂತು ಹೋಗಿದೆ,ಇತಿಹಾಸ, ಸಾಹಿತ್ಯ, ಜಾನಪದ ಮತ್ತು ಸಂಶೋಧನೆಯನ್ನು ಮುಖ್ಯವಾಗಿರಿಸಿಕೊಂಡು ಬನವಾಸಿಯಲ್ಲಿ ಗ್ರಾಮೀಣ ವಿಶ್ವವಿದ್ಯಾಲಯವಾದಲ್ಲಿ ಕನ್ನಡನಾಡಿನ ಪ್ರಥಮ ರಾಜಧಾನಿ ಸಹಜವಾಗಿಯೇ ಅಭಿವೃದ್ಧಿಯಾಗುತ್ತದೆ ಮತ್ತು ವಿಶ್ವ ವಿದ್ಯಾಲಯಕ್ಕೂ ಒಂದು ಪ್ರಾಮುಖ್ಯತೆ ಬರುತ್ತದೆ. ಇತ್ತೀಚೆಗೆ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ ಅದು ಬನವಾಸಿಯ ಕೈ ತಪ್ಪಿ ಹೋಗುವ ಸಾಧ್ಯತೆಯೂ ಇದೆ. ಇದು ಯಾವುದೇ ಕಾರಣಕ್ಕೂ ಬನವಾಸಿಯನ್ನು ಬಿಟ್ಟು ಬೇರೆ ಯಾವ ಸ್ಥಳದಲ್ಲೂ ಸ್ಥಾಪನೆಯಾಗಬಾರದು. ಇದರ ಕುರಿತು ಕಳೆದ ವರ್ಷದ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನದಲ್ಲೂ ನಿರ್ಣಯ ಮಂಡನೆಮಾಡಿದ್ದೆವು. ಈ ಗ್ರಾಮೀಣ ವಿಶ್ವವಿದ್ಯಾಲಯ ಬನವಾಸಿಗೇ ಬರಬೇಕು,ಈ ಬಗ್ಗೆ ನಮ್ಮ ಜನಪ್ರತಿನಿಧಿಗಳೆಲ್ಲ ಪಕ್ಷಾತೀತವಾಗಿ ಪೂರ್ಣಪ್ರಮಾಣದ ಇಚ್ಛಾಶಕ್ತಿಯೊಂದಿಗೆ ಪ್ರಯತ್ನಿಸಿ ಮತ್ತೆ ಬನವಾಸಿಯ ಹಳೆಯ ವೈಭವ ಮರುಕಳಿಸುವಂತೆ ಮಾಡಬೇಕೆಂದು ಖ್ಯಾತ ಇತಿಹಾಸತಜ್ಞ, ಉಪನ್ಯಾಸಕ ಲಕ್ಷ್ಮೀಶ್ ಸೋಂದಾ ಆಗ್ರಹಿಸಿದ್ದಾರೆ.