ಸಿಇಟಿ ಫಲಿತಾಂಶ ಪ್ರಕಟ: ಶ್ರೀಧರ್ ದೊಡ್ಡಮನಿ ಪ್ರಥಮ ರ್ಯಾಂಕ್

 

ಬೆಂಗಳೂರು, ಜೂ.1- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟವಾಗಿದ್ದು, ಶ್ರೀಧರ್ ದೊಡ್ಡಮನಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರಾಜ್‍ಕುಮಾರ್ ಕತ್ರಿ ಅವರು, ಇಂಜನಿಯರಿಂಗ್ ಹಾಗೂ ಬಿಎಸ್ಸಿ ಅಗ್ರಿಕಲ್ಚರ್‍ನಲ್ಲಿ ಶ್ರೀಧರ್ ದೊಡ್ಡಮನಿ ಪ್ರಥಮ ರ್ಯಾಂಕನ್ನು ಪಡೆದಿದ್ದು, ಬಿವಿಎಸ್‍ಸಿಯಲ್ಲಿ ವಿನೀತ್ ಮೆಗೂರ್ ಹಾಗೂ ಬಿ ಫಾರ್ಮಾ-ಫಾರ್ಮಾ ಡಿಯಲ್ಲಿ ತುಹಿನ್ ಗಿರಿನಾಥ್ ಪ್ರಥಮ ರ್ಯಾಂಕ್ ಪಡೆದಿದ್ದಾರೆ ಎಂದು ಪ್ರಕಟಿಸಿದರು.

ವಿಜಯನಗರದ ಎಕ್ಸಲೆಂಟ್ ಪಿಯು ಕಾಲೇಜು ವಿದ್ಯಾರ್ಥಿ ಅಗ್ರಿಕಲ್ಚರ್‍ನಲ್ಲಿ ಶ್ರೀಧರ್ ದೊಡ್ಡಮನಿ ಪ್ರಥಮ ಸ್ಥಾನ ಪಡೆದರೆ, ದಕ್ಷಿಣ ಕನ್ನಡದ ನಾರಾಯಣ ಪೈ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಒಟ್ಟು 1,98,639 ವಿದ್ಯಾರ್ಥಿಗಳು ಈ ಬಾರಿ ಪ್ರವೇಶ ಪರೀಕ್ಷೆ ಬರೆದಿದ್ದರು. ಅದರಲ್ಲಿ ಇಂಜನಿಯರಿಂಗ್‍ನಲ್ಲಿ 1,46,063 ಮಂದಿ, ಕೃಷಿ ಕೋರ್ಸ್‍ಗೆ 1,13,999 ಮಂದಿ, ಪಶುಸಂಗೋಪನೆ 1,15,364, ಬಿ ಫಾರ್ಮಾದಲ್ಲಿ 1,47,543 ವಿದ್ಯಾರ್ಥಿಗಳು ಈ ಬಾರಿ ಅರ್ಹತೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಕಳೆದ ಬಾರಿ 1.08 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ವರ್ಷ ಏ.19ರಿಂದ 20ರವರೆಗೆ ಸಿಇಟಿ ಪರೀಕ್ಷೆ ನಡೆದಿತ್ತು. ಜೂ.25ರಿಂದ ಮೊದಲ ಹಂತದ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು, ಆ.18ಕ್ಕೆ ಕೊನೆಯ ಹಂತದ ಕೌನ್ಸಿಲಿಂಗ್ ನಡೆಯಲಿದೆ.
ವೆಬ್‍ಸೈಟ್‍ಗಳಲ್ಲಿ ಇಂದು ಮಧ್ಯಾಹ್ನ 3 ಗಂಟೆಯಿಂದ ಫಲಿತಾಂಶ ಪ್ರಕಟಗೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಮಂಜುಳಾ ಮತ್ತಿತರರಿದ್ದರು.
ರ್ಯಾಂಕ್ ಪಡೆದವರ ವಿವರ:
ಬಿಎಸ್‍ಸಿ ಅಗ್ರಿಕಲ್ಚರ್: ಶ್ರೀಧರ್ ದೊಡ್ಡಮನಿ, ಎಕ್ಸಲೆಂಟ್ ಸೈನ್ಸ್ ಕಾಲೇಜು, ವಿಜಯಪುರ. ಶೈ ಕುಮಾರ್, ಚೇತನ್ ಇಂಡಿಪೆಂಡೆಂಟ್ ಪಿಯು ಕಾಲೇಜು, ಹುಬ್ಬಳ್ಳಿ ಧಾರವಾಡ. ಮಹಿಮಾ ಕೃಷ್ಣ, ವಿ.ವಿ.ಎಸ್. ಸರ್ದಾರ್ ಪಟೇಲ್ ಕಾಲೇಜು, ಬೆಂಗಳೂರು.
ವೆಟರ್ನರಿ ಸೈನ್ಸ್: ವಿನೀತ್ ಮೆಗೂರ್, ಎಕ್ಸ್‍ಪರ್ಟ್ ಪಿಯು ಕಾಲೇಜು, ಮಂಗಳೂರು. ಅಪರೂಪ, ಸಂಕಲ್ಪ ಪಿಯು ಕಾಲೇಜು, ಬಳ್ಳಾರಿ. ಆದಿತ್ಯ ಚಿದಾನಂದ, ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್, ಬೆಂಗಳೂರು.

ಫಾರ್ಮಾ: ತುಹೀನ್ ಗಿರಿನಾಥ್, ನಾರಾಯಣ ಇಟೆಕ್ನೋ ಬೆಂಗಳೂರು. ಅನಿತಾ ಜೇಮ್ಸ್, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬೆಂಗಳೂರು. ಯೋಗೇಶ್ ಮಾಧವ, ನಾರಾಯಣ ಇ ಟೆಕ್ನೋ ಬೆಂಗಳೂರು.
ಈ ಎಲ್ಲಾ ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ರ್ಯಾಂಕ್ ಪಡೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ