ಜನಪಥ್ ಅಲ್ಲ ನಮ್ಮದು ಜನಮತ ಸರ್ಕಾರ: ಪ್ರಧಾನಿ ಮೋದಿ ಅಭಿಮತ

ಕಟಕ್,ಮೇ 26: ನಮ್ಮ ಸರಕಾರ ಜನಪಥ್‍ದಿಂದ ನಡೆಯುವುದಿಲ್ಲ. ನಮ್ಮದು ಜನಮತದಿಂದ ನಡೆಯುತ್ತಿರುವ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ಧಾರೆ.

ಕೇಂದ್ರ ಸರಕಾರದ 4 ವರ್ಷದ ಸಾಧನೆಗಳ ಕುರಿತು ಒಡಿಶಾದ ಕಟಕ್‍ನಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಎಲ್ಲ ನಿರ್ಧಾರಗಳು ಹೊಸದಿಲ್ಲಿಯ 10, ಜನಪಥ್‍ನಲ್ಲಿ ಆಗುತ್ತವೆ ಎನ್ನುವುದನ್ನು ಪರೋಕ್ಷವಾಗಿ ಟೀಕಿಸಿದರು.

ಪ್ರಸ್ತುತ ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಪಕ್ಷಗಳು ಪರಸ್ಪರ ಒಂದಾಗುವ ಮೂಲಕ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿವೆ. ಭ್ರಷ್ಟಾಚಾರಗಳು ಬಯಲಿಗೆ ಬರುವ ಆತಂಕ ಅವರಲ್ಲಿದೆ. ತಮ್ಮ ಅಪರಾಧಗಳನ್ನು ಮುಚ್ಚಿಕೊಳ್ಳಲು ಒಂದೇ ವೇದಿಕೆಯಡಿ ಆ ಪಕ್ಷದ ನಾಯಕರು ಬಂದು ನಿಂತಿದ್ಧಾರೆ. ಜನರು ಇಂತಹ ಸೂಕ್ಷ್ಮ ವಿಚಾರಗಳನ್ನು ಗಮನಿಸುತ್ತಿದ್ಧಾರೆ ಎಂದು ಟೀಕಿಸಿದರು.

2014ರ ವರೆಗೆ ದೇಶದಲ್ಲಿ ಬಡವರು ಬಡವರಾಗಿಯೇ ಉಳಿದಿದ್ದರು. ಸರ್ಕಾರದ ಯಾವುದೇ ಯೋಜನೆಗಳು ಜನರವರೆಗೆ ತಲುಪುತ್ತಿರಲಿಲ್ಲ.

ಚುನಾವಣೆಯ ಸಂದರ್ಭ ಬಂದಾಗ ಮಾತ್ರ ಕಾಂಗ್ರೆಸ್‍ಗೆ ಮತ ನೀಡುವವರಿಗೆ ಮಾತ್ರ ಸರ್ಕಾರದ ಯೋಜನೆಗಳು ಹಂಚಿಕೆಯಾಗುತ್ತಿದ್ದವು. ಆದರೆ ಈಗ ಎಲ್ಲವೂ ಬದಲಾಗಿದೆ. ಬಡವರು, ಮಧ್ಯಮ ವರ್ಗ ಸೇರಿದಂತೆ ದೇಶದ ನಾಗರಿಕರ ಜೀವನ ಮಟ್ಟ ಸುಧಾರಣೆಯಾಗಿದೆ ಎಂದರು.

ಕಳೆದ 4 ವರ್ಷದ ಸಾಧನೆ ಹಾಗೂ ಯುಪಿಎ ಸರ್ಕಾರದ ಕಳೆದ 48 ವರ್ಷದ ಕಾರ್ಯವೈಖರಿಯನ್ನು ತುಲನೆ ಮಾಡುತ್ತಾ, ಕಾಂಗ್ರೆಸ್ ಪಕ್ಷದ ಮೇಲೆ ಟೀಕಾಪ್ರಹಾರ ನಡೆಸಿದ ಮೋದಿ, ಕಾಂಗ್ರೆಸ್ ಕೇವಲ ತಮ್ಮ ಕುಟುಂಬ ಅಭಿವೃದ್ಧಿಯತ್ತ ಮಾತ್ರ ಗಮನ ಕೊಟ್ಟಿದೆ ಎಂದು ದೂರಿದರು.

ಬಡವರು ಎಂದಿಗೂ ಮತಬ್ಯಾಂಕ್‍ನ ಸಂತ್ರಸ್ತರಾಗಿ ಉಳಿಯುವುದಿಲ್ಲ. ಬಡವರನ್ನು ಸಂಪೂರ್ಣವಾಗಿ ಕಾಂಗ್ರೆಸ್ ಕಡೆಗಣಿಸಿದೆ. ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದರಿಂದಲೇ ಇಂದು 10 ಮಂದಿ ಮಾಜಿ ಮುಖ್ಯಮಂತ್ರಿಗಳು ಜೈಲು ವಾಸದಲ್ಲಿದ್ಧಾರೆ. 3500 ಕೋಟಿ ರೂ. ಮೊತ್ತದ ಸ್ಥಿರಾಸ್ತಿಗಳನ್ನು ಬೇನಾಮಿ ಆಸ್ತಿ ಕಾಯ್ದೆ ಪ್ರಕಾರ ವಶಪಡಿಸಿಕೊಳ್ಳಲಾಗಿದೆ. ಶ್ರೀಮಂತರು ಮಾಡಿರುವ ತಪ್ಪುಗಳು ಬಯಲಾಗುವುದಿಲ್ಲ ಎಂಬ ಮಾತು ಕಳೆದ 4 ವರ್ಷದಲ್ಲಿ ಹುಸಿಗೊಳಿಸಲಾಗಿದೆ ಎಂದು ಮೋದಿ ಹೇಳಿದರು.

ಕುಟುಂಬ ರಾಜಕಾರಣದಲ್ಲಿ ಬೆಂದಿದ್ದ ದೇಶ, ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಎಲ್ಲ ವಿಭಾಗದಲ್ಲೂ ಅಗ್ರ ಪಂಕ್ತಿ ಕಾಯ್ದುಕೊಳ್ಳುತ್ತಿದೆ. ಮೂಲಸೌಕರ್ಯಗಳಿಗೂ ಕೈಚಾಚುವ ಕಾಲ ದೂರವಾಗಿ ಸರ್ಕಾರದ ಪ್ರತಿ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ಬರುವಂತಾಗಿದೆ. ದೇಶ ಇಂದು ಕಾಳಧನದಿಂದ ಜನಧನ್‍ಗೆ ಪರಿವರ್ತನೆಯಾಗುತ್ತಿದೆ. ಕೆಟ್ಟ ಆಡಳಿತ ವ್ಯವಸ್ಥೆಯಿಂದ ಅತ್ಯುತ್ತಮ ವ್ಯವಸ್ಥೆಗೆ ಪರಿವರ್ತನೆ ಕಾಣುತ್ತಿದೆ ಎಂದು ಹೇಳಿದರು.

ಕೇಂದ್ರ ಸರಕಾರ ಒಡಿಶಾದ ಮಹಾನದಿ ನದಿ ನೀರು ಹಂಚಿಕೆಯ ಸಮಸ್ಯೆ ಬಗೆಹರಿಸಲು ಬದ್ಧವಾಗಿದೆ. ಒಡಿಶಾ ಸರ್ಕಾರದೊಂದಿಗೆ ಅನೇಕ ಬಾರಿ ಮಾತುಕತೆಗೆ ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ವ ಪ್ರಯತ್ನ ಮಾಡಲಿದೆ ಎಂದು ಆಶ್ವಾಸನೆ ನೀಡಿದರು.

ಆರೋಗ್ಯ ಕ್ಷೇತ್ರ, ಗ್ರಾಮೀಣ ಭಾಗದಲ್ಲಿ ರಸ್ತೆ, ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ, ಬ್ಯಾಂಕ್ ಖಾತೆ, ಡಿಜಿಟಲ್ ವ್ಯವಹಾರ, ಎಲ್‍ಪಿಜಿ ಸಂಪರ್ಕ ಇತ್ಯಾದಿ ಅಗತ್ಯ ಮೂಲಸೌಕರ್ಯಗಳನ್ನು ನೀಡಲಾಗುತ್ತಿದೆ. ದೇಶ ದೊಡ್ಡ ಮಟ್ಟದ ಬದಲಾವಣೆ ಕಾಣುತ್ತಿದೆ. ಸದೃಢ ಸಮಾಜ ನಿರ್ಮಾಣಕ್ಕೆ ಕಟಿಬದ್ಧವಾಗಿರುವ ಸರ್ಕಾರ, ಎಲ್ಲರ ವಿಕಾಸಕ್ಕಾಗಿ ಕೆಲಸ ಮಾಡುತ್ತಿದೆ. ಮುಂದಿನ ಪೀಳಿಗೆಗೆ ಅತ್ಯುತ್ತಮ ಶಿಕ್ಷಣ, ಮೂಲಸೌಕರ್ಯಗಳನ್ನು ನೀಡುವ ಮೂಲಕ ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುತ್ತಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ