ವಿಶ್ವಾಸಮತ ಸಾಬೀತುಪಡಿಸಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು:ಮೇ-೨೫: ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್‌ನ ಬೆಂಬಲದೊಂದಿಗೆ ಮೈತ್ತಿ ಸರ್ಕಾರ ರಚಿಸಿ, ಮುಖ್ಯಮಂತ್ರಿಯಾಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಇಂದು ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದರು.

ವಿಶ್ವಾಸಮತ ಯಾಚನೆ ಪ್ರಸ್ತಾಪ ಮಂಡಿಸಿದ ಎಚ್‌.ಡಿ.ಕುಮಾರಸ್ವಾಮಿ ಸುದೀರ್ಘ ಭಾಷಣ ಮಾಡಿದರು. ಬಳಿಕ, ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಮಾತನಾಡಿದರು. ಬಿಎಸ್‌ವೈ ತಮ್ಮಮಾತು ಮುಗಿಸಿ, ಕಲಾಪವನ್ನು ಬಹಿಷ್ಕರಿಸಿ, ಸನದನದಿಂದ ಹೊರ ನಡೆದರು.

ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಕುಮಾರಸ್ವಾಮಿ, ಕೊನೆಯಲ್ಲಿ ಸದನದಲ್ಲಿ ವಿಶ್ವಾಸ ಮತ ಕೋರಿದರು. ಸಭಾಧ್ಯಕ್ಷರು ಪ್ರಸ್ತಾವವನ್ನು ಧ್ವನಿಮತಕ್ಕೆ ಹಾಕಿ, ಬೆಂಬಲಿಸುತ್ತೇವೆ ಎನ್ನುವವರು ಹೌದು ಎಂದು, ಬೆಂಬಲಿಸದವರು ಇಲ್ಲಾ ಎಂದು ಹೇಳುವಂತೆ ಕೋರಿದರು.

ಬಳಿಕ, ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಕೂಟದ ಸದಸ್ಯರು ಹೌದು ಎಂದು ಧ್ವನಿ ಮತದ ಮೂಲಕ ಬಹುಮತ ತೋರಿದರು. ನಂತರ, ಸಭಾಧ್ಯಕ್ಷ ಕೆ.ಆರ್‌. ರಮೇಶ್‌ಕುಮಾರ್‌ ಅವರು ವಿಶ್ವಾಸಮತವನ್ನು ಅನುಮೋದಿಸಿದರು.

ವಿಶ್ವಾಸಮತ ಸಿಗುತ್ತಿದ್ದಂತೆ ಕಾಂಗ್ರೆಸ್‌–ಜೆಡಿಎಸ್‌ ಶಾಸಕರು ಪರಸ್ಪರ ಹಸ್ತಲಾಘವ ಮಾಡಿ, ಮುಖ್ಯಮಂತ್ರಿಗಳಿಗೆ ಶುಭಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ