ಲಾರಿಗೆ ಕಾರು ಡಿಕ್ಕಿ: ಖಾಸಗಿ ವಾಹಿನಿಯ ಇಬ್ಬರು ನಿರೂಪಕರು ಸ್ಥಳದಲ್ಲೇ ಮೃತ

ದಾವಣಗೆರೆ, ಮೇ 24- ರಸ್ತೆ ಬದಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ವಾಹಿನಿಯ ಇಬ್ಬರು ನಿರೂಪಕರು ಸ್ಥಳದಲ್ಲೇ ಸಾವನ್ನಪ್ಪಿ , ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಹರಿಹರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ವಾಹಿನಿಯ ನಿರೂಪಕ ಚಂದ್ರಶೇಖರ್ (24) ಹಾಗೂ ಸಂತೋಷಿ (24) ಮೃತ ದುರ್ದೈವಿಗಳಾಗಿದ್ದು , ರಾಮು ಮತ್ತು ಸುನೀತಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರ್ಯಕ್ರಮದ ನಿಮಿತ್ತ ಬೆಂಗಳೂರಿನಿಂದ ಹುಬ್ಬಳ್ಳಿಗೆ ಕಾರಿನಲ್ಲಿ ನಾಲ್ವರು ಹೋಗುತ್ತಿದ್ದಾಗ ಹರಿಹರ ತಾಲ್ಲೂಕಿನ ಹಗನವಾಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ಬದಿ ಯಾವುದೇ ಮುನ್ಸೂಚನೆ ದೀಪ ಅಳವಡಿಸದೆ ಲಾರಿ ನಿಲ್ಲಿಸಿದ್ದರಿಂದ ಚಾಲಕನ ಗಮನಕ್ಕೆ ಇದು ಅರಿವಾಗದೆ ಕಾರು ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ದಾವಣಗೆರೆಯ ಆಸ್ಪತ್ರೆಗೆ ಸೇರಿಸಲಾಗಿದ್ದು , ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ಎರಡು ದಿನಗಳ ಹಿಂದೆ ಕೆಟ್ಟು ನಿಂತಿರುವ ಲಾರಿಯನ್ನು ದುರಸ್ತಿಗೊಳಿಸದೆ ಅಲ್ಲೇ ನಿಲ್ಲಿಸಲಾಗಿತ್ತು. ಮತ್ತು ನಿನ್ನೆಯೂ ಕೂಡ ಅಪಘಾತವಾಗಿ ಒಬ್ಬರು ಇದೇ ಸ್ಥಳದಲ್ಲಿ ಅಸು ನೀಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಹರಿಹರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ