ನಾಳೆ ಸಂಜೆ 4.30ಕ್ಕೆ ಮುಖ್ಯಮಂತ್ರಿಯಾಗಿ ಎಚ್‍ಡಿಕೆ ಪ್ರಮಾಣ; ಈ ಸಮಯದಲ್ಲೇ ಪ್ರತಿಜ್ಞೆ ಯಾಕೆ?

ಬೆಂಗಳೂರು,ಮೇ 22

ಕೈಯಲ್ಲಿ ನಿಂಬೆಹಣ್ಣು ಇಲ್ಲದೇ ಮನೆಯಿಂದ ಹೊರನಡೆಯದ ಹೆಚ್‍.ಡಿ. ರೇವಣ್ಣ, ಕೊಂಚ ಮೂಡ್ ಔಟ್ ಆದರೂ ರಾಜ್ಯದ ಹೊರ ರಾಜ್ಯದ ಜ್ಯೋತಿಷಿಗಳ ಕೈಯಲ್ಲಿ ಜಾತಕ ಓದಿಸೋ ದೊಡ್ಡ ಗೌಡರು. ಹೀಗಿರುವಾಗ ದೊಡ್ಡ ಗೌಡರ ಮನೆ ಮಗ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಮುಹೂರ್ತ ಎಂತದ್ದು ಇರಬಹುದು ಎಂಬ ಕುತೂಹಲ ಹಲವರಲ್ಲಿದೆ.

ಹೆಚ್‍ಡಿಕೆ ಪ್ರಮಾಣ ವಚನ ಸಮಾರಂಭ ಬುಧವಾರ ಸಂಜೆ ನಾಲ್ಕು ಗಂಟೆಯ ಬಳಿಕ ನಡೆಯಲಿದ್ದು ಅದು ಅಮೃತ ಸಿದ್ಧಿ ಯೋಗದ ಮುಹೂರ್ತವಂತೆ. ಬುಧವಾರ ಬೆಳಗ್ಗೆ 9 ಗಂಟೆಯಿಂದ 10 ಗಂಟೆಗೆ ಸಮಯ ಚೆನ್ನಾಗಿದ್ದರೂ ಸಂಜೆಯ ವೇಳೆ ನವಮಿ ಪೂರ್ವ ಫಲ್ಗುಣಿ ಅಮೃತ ಸಿದ್ಧಿ ಯೋಗದಲ್ಲಿಯೇ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಾಮಾನ್ಯವಾಗಿ ಅಮೃತ ಸಿದ್ಧಿ ಯೋಗ ಎಂದರೆ ಸ್ಥಿರ, ಚಂಚಲತೆ ಇರುವುದಿಲ್ಲ. ಇದಕ್ಕಾಗಿಯೇ ಈ ಸಮಯದಲ್ಲಿಯೇ ಖುಷಿ ಮುನಿಗಳು ಯೋಗ ಸಿದ್ಧಿಗಾಗಿ ತಪಸ್ಸಿಗಾಗಿ ಕುಳಿತುಕೊಂಡ ಐತಿಹ್ಯ ಇದೆ. ಚಂಚಲತೆ ಇಲ್ಲದೇ, ಸ್ಥಿರತೆ ಇರಲಿ, ಮೈತ್ರಿ ಸರ್ಕಾರದಲ್ಲಿ ತೊಡಕಾಗದಿರಲಿ ಎಂದು ಈ ಸಮಯದಲ್ಲಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹಿರಿಯ ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ.

ಆರಂಭದಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎನ್ನುವ ಸುದ್ದಿ ಸಿಕ್ಕಿತ್ತು. ಆದರೆ ಈಗ ಸ್ಥಳ ಬದಲಾಗಿದ್ದು, ಬುಧವಾರ ಸಂಜೆ 4.30ಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಒಬ್ಬಂಟಿಯಾಗಿ ರೇವಣ್ಣ ಪ್ರಮಾಣ: ಗ್ರಹ, ಕಾಲ ನೋಡಿಯೇ ಮುಂದುವರಿಯುವ ಜೆಡಿಎಸ್‍ನ ಎಚ್.ಡಿ.ರೇವಣ್ಣ ಶನಿವಾರ ತಮಗೆ ಶುಭಕಾಲದಲ್ಲೇ ಪ್ರಮಾಣವಚನ ನೀಡಲು ಸ್ಪೀಕರ್ ಬೋಪಯ್ಯ ಅವರಿಗೆ ಚೀಟಿ ನೀಡಿದ್ದರು. ಈ ವೇಳೆ ಕುಳಿತುಕೊಳ್ಳಿ ಸಂಜೆ 4 ಗಂಟೆ ಯವರೆಗೆ ಸಮಯಾವಕಾಶವಿದೆ. ನಿಗದಿತ ಪಟ್ಟಿಯಂತೆ ಪ್ರಮಾಣವಚನ ನಡೆಯುತ್ತದೆ ಎಂದು ತಿಳಿಸಿದರು. ಈ ವೇಳೆ ರೇವಣ್ಣ ಪತ್ರಕರ್ತರ ಗ್ಯಾಲರಿಗೆ ಬಂದಾಗ ಮಾಧ್ಯಮದವರು ಉತ್ತಮ ಗಳಿಗೆಯನ್ನು ನೋಡಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರಾ ಎಂದು ಕೆಣಕಿದರು. ನನ್ನದು ಸ್ವಾತಿ ನಕ್ಷತ್ರ ಯಾವುದೇ ಗಳಿಗೆ ಇಲ್ಲ. ಯಾವಾಗ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದು ಎಂದು ಹೇಳಿ ರೇವಣ್ಣ ಹೊರ ನಡೆದಿದ್ದರು. ಆರಂಭದಲ್ಲಿ 5 ಮಂದಿ ನಂತರ 10 ಮಂದಿ ಬಳಿಕ ಇಬ್ಬರಂತೆ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ರೇವಣ್ಣ ಒಬ್ಬಂಟಿಯಾಗಿ ಮಧ್ಯಾಹ್ನ 12.50ಕ್ಕೆ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ