ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಜಭವನದಲ್ಲಿ ಅಭಿಮಾನಿಗಳ ಹಾಗೂ ಕಾರ್ಯಕರ್ತರ ಸಡಗರ-ಸಂಭ್ರಮ

 

ಬೆಂಗಳೂರು, ಮೇ 17- ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಜಭವನದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಸಡಗರ-ಸಂಭ್ರಮ ಮನೆ ಮಾಡಿತ್ತು.

ಇಂದು ಬೆಳಗ್ಗೆ 9 ಗಂಟೆಗೆ ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿದ ವೇಳೆ ರಾಜ್ಯದ ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಡ್ಯ, ಕೆಆರ್ ಪೇಟೆ, ಹಾಸನ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪ್ರಮಾಣ ವಚನ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಅನೇಕರಿಗೆ ರಾಜಭವನದ ಒಳಗೆ ಪ್ರವೇಶ ನಿರಾಕರಿಸಲಾಗಿತ್ತು. ಅತಿಯಾದ ನಿರ್ಬಂಧ ಹಾಗೂ ಪಾಸ್ ಇದ್ದವರಿಗೆ ಮಾತ್ರ ರಾಜಭವನದೊಳಗೆ ಪ್ರವೇಶ ನೀಡಲಾಯಿತು. ಹೀಗಾಗಿ ಸಾಕಷ್ಟು ಮಂದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ನಿರಾಸೆಯಿಂದ ಹಿಂದಿರುಗುವಂತಾಯಿತು.

ರಾಜಭವನದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಯಡಿಯೂರಪ್ಪ, ಬಿಜೆಪಿ ಹಾಗೂ ಮೋದಿ ಪರವಾದ ಜಯಘೋಷಗಳು ಕೇಳಿಬಂದಿದ್ದಲ್ಲದೆ, ಪಟಾಕಿ ಹೊಡೆದು ಸಂಭ್ರಮಿಸಿ ಸಿಹಿ ಹಂಚಲಾಯಿತು.

ಟ್ರಾಫಿಕ್ ಜಾಮ್: ರಾಜಭವನದಲ್ಲಿಂದು ಬೆಳಗ್ಗೆ ನಡೆದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳುವುದರ ಜತೆಗೆ ರಾಜಭವನದ ಮುಂದೆಯೂ ಸಾಕಷ್ಟು ಜನ ಜಮಾಯಿಸಿದ್ದರಿಂದ ಸುತ್ತಮುತ್ತಲ ರಸ್ತೆಗಳೆಲ್ಲ ತುಂಬಿ ವಾಹನ ದಟ್ಟಣೆ ಉಂಟಾಯಿತು.

ಅದರಲ್ಲೂ ಪ್ರಮುಖವಾದ ಬಸವೇಶ್ವರ ವೃತ್ತ, ವಿಧಾನಸೌಧದ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದರಿಂದ ಕಚೇರಿಗೆ ತೆರಳುವವರಿಗೆ ತೊಂದರೆಯಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ