ವಿಧಾನಸಭೆ ಚುನಾವಣೆಗಾಗಿ ಜಿಲ್ಲೆಯಲ್ಲಿ ಒಟ್ಟು 11 ಪಿಂಕ್ ಮತಗಟ್ಟೆ:

ತುಮಕೂರು, ಮೇ 12- ಈ ಬಾರಿ ವಿಧಾನಸಭೆ ಚುನಾವಣೆಗಾಗಿ ಜಿಲ್ಲೆಯಲ್ಲಿ ಒಟ್ಟು 11 ಪಿಂಕ್ ಮತಗಟ್ಟೆಯನ್ನು ತೆರೆಯಲಾಗಿದ್ದು, ಮಹಿಳೆಯರು ಬೆಳಗ್ಗೆ ಏಳು ಗಂಟೆಗೆ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.
ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಸುಧಾಕರ್‍ಲಾಲ್ ಪಿಂಕ್ ಮತಗಟ್ಟೆಗೆ ತೆರಳಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್‍ಲಾಲ್, ಕೊರಟಗೆರೆ ಕ್ಷೇತ್ರದಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ. ಎಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೇಳಿದರು.
ಕಳೆದ ಮೂರ್ನಾಲ್ಕು ದಿನಗಳಿಂದ ಕೋಟಿಗಟ್ಟಲೆ ಹಣ ಹಂಚಿಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೂ ಪ್ರಜ್ಞಾವಂತ ಮತದಾರರು ಇದಕ್ಕೆ ಬಲಿಯಾಗುವುದಿಲ್ಲ. ಇದಕ್ಕೆ ಇದೇ 15ರಂದು ಉತ್ತರ ಸಿಗಲಿದೆ ಎಂದರು.
ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರ ಕಾಳಜಿ, ಬಿಎಸ್‍ಪಿಯೊಂದಿಗಿನ ಮೈತ್ರಿ ನಮಗೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ