ಬಿಬಿಎಂಪಿ ವ್ಯಾಪ್ತಿಯ 27 ಕ್ಷೇತ್ರಗಳಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆ : ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರರಾವ್

ಬೆಂಗಳೂರು, ಮೇ 10- ಬಿಜೆಪಿ ಅಭ್ಯರ್ಥಿ ವಿಜಯ್‍ಕುಮಾರ್ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಬಿಬಿಎಂಪಿ ವ್ಯಾಪ್ತಿಯ 27 ಕ್ಷೇತ್ರಗಳಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಮೇ 12ರಂದು ಚುನಾವಣೆ ನಡೆಯಲಿರುವುದರಿಂದ ಇಂದು ಸಂಜೆ 5 ಗಂಟೆಯಿಂದ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗಿದೆ ಎಂದು ಅವರು ಹೇಳಿದರು.

ಇಂದು ಸಂಜೆ 5 ರಿಂದ ಮೇ 12ರ ಮಧ್ಯರಾತ್ರಿವರೆಗೂ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಹಾಗೂ ಮತ ಎಣಿಕೆ ದಿನ ಬೆಳಗ್ಗೆ 7ರಿಂದ ಮಧ್ಯರಾತ್ರಿ 12ರ ವರೆಗೆ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅವರು ವಿವರಿಸಿದರು.
ಇಂದು ಸಂಜೆ 7 ಗಂಟೆಯಿಂದ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಸಂಜೆ 7ರ ನಂತರ 5ಕ್ಕೂ ಹೆಚ್ಚು ಮಂದಿ ಗುಂಪುಗೂಡುವಂತಿಲ್ಲ. ಆದರೆ, ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದಾಗಿದೆ ಎಂದರು.
ಮತದಾರರಲ್ಲದವರು ಇಂದು ಸಂಜೆ 7 ಗಂಟೆ ನಂತರ ಕ್ಷೇತ್ರ ಬಿಟ್ಟು ತೆರಳಬೇಕು. ಮತಗಟ್ಟೆಯ 3 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಪ್ರಚಾರ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

ಎಡಗೈ ತೋರು ಬೆರಳಿಗೆ ಶಾಯಿ: ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರ ಎಡಗೈ ತೋರು ಬೆರಳಿಗೆ ಶಾಯಿ ಬಳಸಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.
ಸ್ಥಳದಲ್ಲೇ ಚೀಟಿ: ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿರುವ ಮತದಾರರಿಗೆ ಈಗಾಗಲೇ ಭಾವಚಿತ್ರವುಳ್ಳ ಮತದಾನ ಚೀಟಿಯನ್ನು ವಿತರಿಸಲಾಗಿದೆ.

ಒಂದು ವೇಳೆ ಮತದಾನ ಚೀಟಿ ದೊರೆಯದಿರುವವರು ಮತಗಟ್ಟೆ ಸಮೀಪ ಆಯೋಗದಿಂದ ಸ್ಥಾಪಿಸಲ್ಪಟ್ಟಿರುವ ವೋಟರ್ ಅಸಿಸ್ಟೆಂಟ್ ಬೂತ್‍ಗಳಲ್ಲಿ ವೋಟರ್ ಐಡಿ ಇಲ್ಲವೆ 11 ದಾಖಲಾತಿಗಳನ್ನು ತೋರಿಸಿ ಸ್ಥಳದಲ್ಲೇ ಮತದಾನ ಚೀಟಿ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಚೀಟಿ ದೊರೆಯದಿರುವ ಮತದಾರರು ಯಾವುದೇ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದು ಅವರು ಅಭಯ ನೀಡಿದರು.
ಕ್ರಿಮಿನಲ್ ಕೇಸ್: ನಾಳೆ ಮಧ್ಯಾಹ್ನ 1.30ರೊಳಗೆ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೆಲಸ ಪೂರ್ಣಗೊಳಿಸಲಾಗುವುದು. ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿರುವ ಅಧಿಕಾರಿಗಳು 1.35ರೊಳಗೆ ಕರ್ತವ್ಯಕ್ಕೆ ಹಾಜರಾಗಲೇಬೇಕು. ಆನಂತರ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಮಹೇಶ್ವರರಾವ್ ಎಚ್ಚರಿಸಿದರು.

100 ಪಿಂಕ್ ಮತಗಟ್ಟೆ: ಮಹಿಳೆಯರು ತಮ್ಮ ಹಕ್ಕು ಚಲಾಯಿಸಲು ಮುಂದೆ ಬರಬೇಕೆಂಬ ಉದ್ದೇಶದಿಂದ ನಗರದಲ್ಲಿ 100 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು.
ಪಿಂಕ್ ಮತಗಟ್ಟೆಗಳೆಂದರೆ ಕೇವಲ ಮಹಿಳೆಯರು ಮಾತ್ರ ಮತ ಚಲಾಯಿಸಲು ಅವಕಾಶ ಕಲ್ಪಿಸುವುದಲ್ಲ. ಮಹಿಳಾ ಮತದಾರರು ಹೆಚ್ಚಿರುವ ಪ್ರದೇಶಗಳಲ್ಲಿ ಗುಲಾಬಿ ಬಣ್ಣದ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಆ ಮತಗಟ್ಟೆಗಳಲ್ಲಿ ಯಾರು ಬೇಕಾದರೂ ಮತ ಚಲಾಯಿಸಬಹುದು.
ವಿಕಲಚೇತನರು ಮತ ಚಲಾಯಿಸಲು ಅನುಕೂಲವಾಗುವಂತೆ ವೀಲ್‍ಚೇರ್, ಬ್ರೈಲ್ ಲಿಪಿ ಮತ್ತು ವಾಹನ ವ್ಯವಸ್ಥೆ ಮಾಡಲು ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಪ್ರಕರಣ ದಾಖಲು: ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಇದುವರೆಗೂ 6.8 ಕೋಟಿ ನಗದು ವಶ, 5.29 ಕೋಟಿ ಮೌಲ್ಯದ 11,699 ಲೀಟರ್ ಮದ್ಯ ವಶ, 39,540 ಪ್ರಕರಣಗಳಲ್ಲಿ 17.43 ಕೋಟಿ ಸೇರಿದಂತೆ ಇದುವರೆಗೂ 31.55 ಕೋಟಿ ರೂ.ಗಳನ್ನು ಎಂಸಿಸಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ನಿರ್ಬಂಧ: ಮತದಾನದ ದಿನ ಅಭ್ಯರ್ಥಿಗಳ ಪರ ದೂರದರ್ಶನ ಇಲ್ಲವೆ ಮುದ್ರಣ ಮಾಧ್ಯಮಗಳಲ್ಲಿ ಬೈಟ್ ಪ್ರಸಾರ ಮಾಡುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಕಾನೂನು ಉಲ್ಲಂಘಿಸುವ ಮಾಧ್ಯಮಗಳ ಮೇಲೂ ಕೇಸು ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಮೂರು ವಾಹನಗಳಿಗೆ ಮಾತ್ರ ಅನುಮತಿ: ಮತದಾನದ ದಿನ ಅಭ್ಯರ್ಥಿ, ಏಜೆಂಟರುಗಳು ಸೇರಿ ಕೇವಲ ಮೂರು ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಅನುಮತಿ ನೀಡಿರುವ ಕಾರಿನಲ್ಲಿ ಬೇರೆಯವರ ವೋಟರ್ ಐಡಿ ಕಾರ್ಡ್ ತೆಗೆದುಕೊಂಡು ಹೋಗುವಂತಿಲ್ಲ. ಮತಕೇಂದ್ರದಲ್ಲಿ ಚುನಾವಣಾಧಿಕಾರಿಗಳಿಗೆ ಮಾತ್ರ ಮೊಬೈಲ್ ಬಳಸಲು ಅವಕಾಶ ನೀಡಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಹೊರಗಿನಿಂದ ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲು 81 ಚೆಕ್‍ಪೆÇೀಸ್ಟ್‍ಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ