ಬಿಜೆಪಿಗೂ ಬಿಸಿ ಮುಟ್ಟಿಸಿದ ಐಟಿ; ಶ್ರೀರಾಮುಲು, ಆಪ್ತರನ್ನು ಗುರಿಯಾಗಿಸಿ ದಾಳಿ!

ಮೊಳಕಾಲ್ಮೂರು,ಮೇ 9

ಬಾದಾಮಿಯಲ್ಲಿ ಕಾಂಗ್ರೆಸ್‌ ಬೆಂಬಲಿತರ ರೆಸಾರ್ಟ್‌ ಮತ್ತು ಹೊಟೇಲ್‌ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಬಿಜೆಪಿಗೂ ಶಾಕ್‌ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ.

ಸಂಸದ, ಬಿಜೆಪಿಯ ಅಭ್ಯರ್ಥಿ ಶ್ರೀರಾಮುಲು ಅವರು ತಂಗಿದ್ದ  ಬಾದಾಮಿ ಯ ಹೊಟೇಲ್‌ ಮತ್ತು ರೆಸಾರ್ಟ್‌ ಮೇಲೆ ಐಟಿ ಅಧಿಕಾರಿಗಳು ಮಂಗಳವಾರ ತಡರಾತ್ರಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ರಾಮುಲು ಆಪ್ತ ಮೊಳಕಾಲ್ಮೂರು ತಾಲೂಕು ಬಿಜೆಪಿ ಅಧ್ಯಕ್ಷ  ಟಿ.ರೇವಣ್ಣ  ಅವರ ತೋಟದ ಮನೆ , ಧನಂಜಯ ರೆಡ್ಡಿ ಎನ್ನುವವರ ದೊಡ್ಡ ಉಳ್ಳಾರ್ತಿಯಲ್ಲಿರುವ ಮನೆಯ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ.

ದಾವಣಗೆರೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಡಾಳ್‌ ವಿರೂಪಾಕ್ಷಪ್ಪ ಅವರ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಐಟಿ ದಾಳಿ ನಡೆಯುತ್ತಿದ್ದಂತೆ ಬೆಂಬಲಿಗರು ಮನೆಯ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರು ಸೋಲಿನ ಭೀತಿಯಿಂದ ಚುನಾವಣೆ ವೇಳೆ ದ್ವೇಷದಿಂದ ಐಟಿ ದಾಳಿ ಮಾಡುತ್ತಿದ್ದಾರೆ. ಸಾಧ್ಯವಿದ್ದರೆ ಬಿಜೆಪಿಗರ ಮೇಲೆ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದರು. ಸವಾಲಿನ ಬೆನ್ನಲ್ಲೇ ಬಿಜೆಪಿಗರ ಮೇಲೆ ಐಟಿ ದಾಳಿ ನಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ