
ವಿವಿಧೆಡೆ ಸೂರ್ಯಕಾಂತ ನಾಗಮಾರಪಳ್ಳಿಪ್ರಚಾರ
ಅಪೂರ್ಣ ಕೆಲಸಗಳೇ ರಹೀಮ್ ಖಾನ್ ಸಾಧನೆ
ಬೀದರ್, ಮೇ 7- ತಾಲೂಕಿನ ಗಾದಗಿ, ಚಿಮಕೋಡ, ಯರನಳ್ಳಿ, ಅಲಿಯಂಬರ, ಜನವಾಡಾ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಭಾನುವಾರ ಅಬ್ಬರದ ಪ್ರಚಾರ ಕೈಗೊಂಡರು. ಡಿಸಿಸಿ ಬ್ಯಾಂಕ್ ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ ಸಹ ತಮ್ಮನ ಪ್ರಚಾರದಲ್ಲಿ ಪಾಲ್ಗೊಂಡು ಜೋಶ್ ನೀಡಿದರು.
ವಿವಿಧೆಡೆ ಮಾತನಾಡಿದ ಸೂರ್ಯಕಾಂತ, ಕಾಂಗ್ರೆಸ್ ಅಭ್ಯರ್ಥಿಯಾದ ಶಾಸಕ ರಹೀಮ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲಸ ಕಮ್ಮಿ, ಸುಳ್ಳು ಹೇಳುವುದೇ ಜಾಸ್ತ್ತಿಯಾಗಿದೆ. ಬ್ರಿಮ್ಸ್ ಬೋಧಕ ಆಸ್ಪತ್ರೆ ಇನ್ನೂ ಜನರಿಗೆ ಬಳಕೆಯಾಗುತ್ತಿಲ್ಲ. ಹಣವಿದ್ದರೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಜಿಲ್ಲಾ ಕಚೇರಿಗಳ ಸಂಕೀರ್ಣದ ಕೆಲಸ ವರ್ಷದಿಂದ ಆರಂಭವಾಗಿಲ್ಲ. ನಗರದ ನಿರಂತರ ನೀರು ಯೋಜನೆ, ಒಳಚರಂಡಿ ಕೆಲಸ ಅಪೂರ್ಣವಿದ್ದು, ಜನರು ವಿವಿಧೆಡೆ ತಿರುಗಾಡಲು ಸಹ ಸಮಸ್ಯೆ ಎದುರಿಸುತ್ತಿದ್ದಾರೆ. ಇದೇನಾ ಇವರ ಸಾಧನೆ ಎಂದು ಪ್ರಶ್ನಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ವಿಜನ್ ಹೊಂದಿರುವೆ. ಅಧಿಕಾರ ಇಲ್ಲದಿದ್ದರೂ ಕಳೆದೊಂದು ದಶಕಗಳಿಂದ ಇಲ್ಲಿ ನಾನಾ ಕೆಲಸ ಮಾಡಿರುವೆ. ಅವಕಾಶ ಕೊಟ್ಟರೆ ಎಲ್ಲ ವರ್ಗದ ಹಿತದಿಂದ ಶ್ರಮಿಸುವೆ.
ಹೊಸ ಹೊಸ ಯೋಜನೆ ತರುವೆ ಎಂದು ಭರವಸೆ ನೀಡಿರುವ ಸೂರ್ಯಕಾಂತ, ಯಾರೂ ಶಾಸಕರ ಸುಳ್ಳಿನ ಮಾತಿಗೆ ನಂಬಬೇಡಿ. ಸಾವಿರ ಕೋಟಿ ರೂ. ತಂದಿz್ದÉೀನೆ ಎಂದು ಹೇಳುತ್ತಿದ್ದಾರೆ. ಆದರೆ ಈ ಹಣ ಎಲ್ಲಿಗೆ ಹೋಯಿತು ಎಂಬುದೇ ಅರ್ಥವಾಗುತ್ತಿಲ್ಲ. ಜನ ಇದನ್ನು ಪ್ರಶ್ನಿಸಿ, ಈಗ ಸೂಕ್ತ ಪಾಠ ಕಲಿಸುತ್ತಾರೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಕ್ಷೇತ್ರದ ಸಮಗ್ರ ವಿಕಾಸವಾಗುವ ಜತೆಗೆ ಎಲ್ಲ ವರ್ಗದ ಹಿತದ ಯೋಜನೆಗಳು ಬರಬೇಕೆಂಬ ಕನಸು ತಂದೆ ದಿ.ಗುರುಪಾದಪ್ಪ ನಾಗಮಾರಪಳ್ಳಿ ಅವರು ಹೊಂದಿದ್ದರು. ಅವರ ಕನಸು ನನಸಾಗಿಸುವ ಧ್ಯೇಯ ನಮ್ಮದು.
ಜನರು ಆಶೀರ್ವಾದ ಮಾಡಿದರೆ ಅವರ ಕನಸು ಸಾಕಾರಕ್ಕೆ ನಾವಿಬ್ಬರೂ ಹಗಲಿರುಳು ದುಡಿಯುತ್ತೇವೆ ಎಂದು ವಾಗ್ದಾನ ಮಾಡಿದರು. ಈ ವೇಳೆ ಸ್ಥಳೀಯರು ನಾಗಮಾರಪಳ್ಳಿ ಬ್ರದರ್ಸ್ಗೆ ಅದ್ದೂರಿ ಸ್ವಾಗತ ನೀಡಿ, ಸತ್ಕರಿಸಿದರು. ಪಕ್ಷದ ಪ್ರಮುಖರು ಇದ್ದರು.