ನಾವು ತೊಡೆ ತಟ್ಟಿ ನಿಂತರೆ ಅದು ಬೇರೆ ಕಥೆ. ಜನಸೇವೆಯೇ ಜನಾರ್ದನ ಸೇವೆ ಎಂದು ಅಂದುಕೊಂಡಿರುವವರು ನಾವು : ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ

ತುಮಕೂರು, ಮೇ 6- ಬಿಜೆಪಿಯವರು ಹಗಲಿನಲ್ಲಿ ಬ್ಯಾಟರಿ ಹಾಕಿಕೊಂಡು ನಮ್ಮ ತಪ್ಪು ಹುಡುಕ್ತಾ ಇದ್ದಾರೆ. ಆದರೆ ಅವರಿಗೆ ಏನೂ ಸಿಗ್ತಿಲ್ಲ. ಹಾಗಾಗಿ ಕಂಗಾಲಾಗಿದ್ದಾರೆ. ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಎದೆ ತಟ್ಟಿ ಹೇಳಿಕೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಶಿರಾ ತಾಲ್ಲೂಕಿನ ಚಿಕ್ಕ ಬಾಣಗೆರೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ವಿರುದ್ಧ ಹರಿಹಾಯ್ದ ಅವರು ಕೇಂದ್ರದಲ್ಲಿ ನಾವು ಇದ್ದೇವೆ ಎಂದು ನಮ್ಮನ್ನು ಕೆಣಕಬೇಡಿ. ಈ ಜೋಡಿ ಏನೇ ಮಾಡಿದರೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ನಾವೇ ಕಿಂಗ್ ಮೇಕರ್ ಎಂದರು.

ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇರೋವರೆಗೂ ಕಾಂಗ್ರೆಸ್ ಅನ್ನು ಯಾರಿಂದಲೂ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಮೌನಕ್ಕೆ ಶರಣಾಗಿದ್ದೇವೆ. ನಾವು ತೊಡೆ ತಟ್ಟಿ ನಿಂತರೆ ಅದು ಬೇರೆ ಕಥೆ. ಜನಸೇವೆಯೇ ಜನಾರ್ದನ ಸೇವೆ ಎಂದು ಅಂದುಕೊಂಡಿರುವವರು ನಾವು. ರಾಜ್ಯಾದ್ಯಂತ ಕಾಂಗ್ರೆಸ್‍ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.

ನಮ್ಮ ಅಭಿವೃದ್ಧಿ ಕಾರ್ಯಗಳು ಪ್ರತಿಯೊಬ್ಬರಿಗೂ ತಲುಪಿದೆ. ಜನರು ಸಹ ಮೆಚ್ಚಿಕೊಂಡಿದ್ದಾರೆ. ಜನರ ಆಶೀರ್ವಾದ ನಮ್ಮ ಮೇಲಿದೆ. ಹಾಗಾಗಿ ಈ ಬಾರಿಯೂ ಸಹ ನಾವೇ ಅಧಿಕಾರ ಹಿಡಿದಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಹಾಗೂ ಅಮಿತ್ ಷಾ ಅವರ ಸುಳ್ಳು ಮೋಡಿ ನಡೆಯುವುದಿಲ್ಲ. ಅವರು ರಾಜ್ಯಕ್ಕೆ ಎಷ್ಟು ಸಲಿ ಬಂದರೂ ಗೆಲುವು ನಮ್ಮದೇ. ಜನರು ಬುದ್ಧಿವಂತರಿದ್ದಾರೆ. ಉತ್ತಮ ಸರ್ಕಾರವನ್ನೇ ಆರಿಸುತ್ತಾರೆ ಎಂದು ಗುಡುಗಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ