ಶಾಸಕ ವಿಜಯ್‍ಕುಮಾರ್ ವಿಧಿವಶ: ಆಪ್ತ ಸ್ನೇಹಿತನ ನಿಧನಕ್ಕೆ ಕೇಂದ್ರ ಸಚಿವ ಅನಂತ್‍ಕುಮಾರ್ ಕಣ್ಣೀರು

ಬೆಂಗಳೂರು, ಮೇ 4- ತಮ್ಮ ಆಪ್ತ ಸ್ನೇಹಿತನ ನಿಧನಕ್ಕೆ ಕೇಂದ್ರ ಸಚಿವ ಅನಂತ್‍ಕುಮಾರ್ ಕಣ್ಣೀರಿಟ್ಟರು.
ಇಂದು ತಮ್ಮ ಪತ್ನಿ ತೇಜಸ್ವಿನಿ ಅನಂತ್‍ಕುಮಾರ್ ಅವರೊಂದಿಗೆ ಮೃತ ಶಾಸಕ ವಿಜಯ್‍ಕುಮಾರ್ ಅವರ ನಿವಾಸಕ್ಕೆ ಆಗಮಿಸಿ ಅವರನ್ನು ನೆನೆದು ಕಂಬನಿ ಮಿಡಿದರು.
ತೀವ್ರ ಭಾವುಕರಾಗಿ ಮಾತನಾಡಿದ ಅವರು, ನನಗೆ ತುಂಬ ಆಘಾತವಾಗಿದೆ.

ನನ್ನ ಆತ್ಮೀಯ ಗೆಳೆಯ ಪ್ರಚಾರದ ವೇಳೆ ಕುಸಿದುಬಿದ್ದಿದ್ದಾರೆ. ತಕ್ಷಣವೇ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕೊನೆ ಹಂತದವರೆಗೆ ಅವರನ್ನು ಉಳಿಸುವ ಯತ್ನ ಮಾಡಲಾಯಿತು. ಆದರೆ, ಫಲಕಾರಿಯಾಗಲಿಲ್ಲ. ಈ ವಿಚಾರ ಸಿಡಿಲು ಬಡಿದಂತಾಗಿದೆ ಎಂದು ಹೇಳಿದರು.

ಬಾಲ್ಯದಿಂದಲೂ ಆರ್‍ಎಸ್‍ಎಸ್‍ನಲ್ಲಿ ಗುರುತಿಸಿಕೊಂಡವರು. ಮದುವೆ ಮಾಡಿಕೊಳ್ಳದೆ ದೇಶಸೇವೆಗೆ ತೊಡಗಿಸಿಕೊಂಡಿದ್ದರು. ಎರಡು ಬಾರಿ ಶಾಸಕರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಮಾದರಿ ಶಾಸಕರಾಗಿದ್ದರು ಎಂದು ನೆನೆದು ಕಣ್ಣೀರಿಟ್ಟರು.

ನನಗೆ ಏನು ಹೇಳಬೇಕು ಎಂದು ತೋಚುತ್ತಿಲ್ಲ. ಅವರೊಂದಿಗೆ 41 ವರ್ಷದ ಒಡನಾಟ ನನ್ನದು. ಕುಟುಂಬದ ಸದಸ್ಯರ ರೀತಿ ನಾವೆಲ್ಲ ಇದ್ದೆವು. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಪರವಾಗಿ ಅಂತಿಮ ನಮನ ಸಲ್ಲಿಸುತ್ತೇನೆ. ವಿಜಯ್‍ಕುಮಾರ್ ಮತ್ತೊಮ್ಮೆ ಹುಟ್ಟಿಬರಲಿ ಎಂಬ ಆಶಯ ನಮ್ಮದು. ಜಯನಗರದಲ್ಲಿ ಮೊದಲ ಬಾರಿಗೆ ನಮ್ಮೆಲ್ಲರ ಒತ್ತಾಯದ ಮೇರೆಗೆ ಚುನಾವಣೆಗೆ ನಿಂತಿದ್ದರು. ಈ ಬಾರಿಯೂ ನನಗೆ ಟಿಕೆಟ್ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಒತ್ತಾಯಪೂರ್ವಕವಾಗಿ ನಾವು ಅಭ್ಯರ್ಥಿಯನ್ನಾಗಿ ಮಾಡಿದ್ದೆವು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ