ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣ ಜೂನ್ 12ರಂದು ವಿಚಾರಣೆಗೆ:

ಥಾಣೆ (ಮಹಾರಾಷ್ಟ್ರ), ಮೇ 3-ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನು ಕೊಂದಿದ್ದು ಆರ್‍ಎಸ್‍ಎಸ್ ಎಂದು ಹೇಳಿಕೆ ನೀಡಿದ್ದಾರೆನ್ನಲಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣ ಜೂನ್ 12ರಂದು ಭೀವಂಡಿ ನ್ಯಾಯಾಲಯವೊಂದರ ಮುಂದೆ ವಿಚಾರಣೆಗೆ ಬರಲಿದೆ. ಅಂದು ರಾಹುಲ್ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ.
ಈ ಸಂಬಂಧ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ರಾಜೇಶ್ ಕುಂಟೆ ಅವರು ಹೂಡಿರುವ ಮಾನನಷ್ಟ ಮೊಕದ್ದಮೆ ಸಂಬಂಧ ರಾಹುಲ್ ಗಾಂಧಿ ಪರ ವಕೀಲರು ಸಲ್ಲಿಸಿದ ಅರ್ಜಿಯಲ್ಲಿನ ವಾದಗಳನ್ನು ಪರಾಮರ್ಶಿಸಿದ ನ್ಯಾಯಾಲಯ, ಸಾರಾಂಶ ಪರಿಶೀಲನೆ ಬದಲು ವಿವರ ಸಾP್ಷÁ್ಯಧಾರಗಳನ್ನು ದಾಖಲಿಸುವುದು ಉತ್ತಮ. ಹೀಗಾಗಿ ಜೂನ್ 12ರಂದು ರಾಹುಲ್ ಗಾಂಧಿ ಅವರು ಖುದ್ದಾಗಿ ಹಾಜರಾಗಿ ಹೇಳಿಕೆ ದಾಖಲಿಸಬೇಕೆಂದು ಕೋರ್ಟ್ ಹೇಳಿ ಆ ದಿನಾಂಕಕ್ಕೆ ವಿಚಾರಣೆ ಮುಂದೂಡಿದೆ.
ಮಹಾರಾಷ್ಟ್ರದ ಥಾಣೆ ಭೀವಂಡಿ ಪಟ್ಟಣದಲ್ಲಿ ಮಾರ್ಚ್ 6, 2014ರಂದು ಚುನಾವಣಾ ರ್ಯಾಲಿ ವೇಳೆ ರಾಹುಲ್‍ಗಾಂಧಿ ಅವರು ಮಹಾತ್ಮ ಗಾಂಧಿ ಅವರ ಹತ್ಯೆಗೆ ಆರ್‍ಎಸ್‍ಎಸ್ ಕಾರಣ ಎಂದು ನೀಡಿದ್ದರೆನ್ನಲಾದ ಹೇಳಿಕೆ ವಿರುದ್ಧ ರಾಜೇಶ್ ಕುಂಟೆ ಮಾನಹಾನಿ ಖಟ್ಲೆ ಹೂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ