ವಿಧಾನಸಭೆ ಚುನಾವಣೆ: ಒಟ್ಟು 3,459 ಅಭ್ಯರ್ಥಿಗಳಿಂದ 4,853 ನಾಮಪತ್ರಗಳ ಸಲ್ಲಿಕೆ

ಬೆಂಗಳೂರು, ಏ.25-ರಾಜ್ಯ ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳಿಂದ ಒಟ್ಟು 3,459 ಅಭ್ಯರ್ಥಿಗಳು 4,853 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಬಿಜೆಪಿ 272 ಪುರುಷರು, 18 ಮಂದಿ ಮಹಿಳೆಯರು ಸೇರಿ 290 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರಸ್‍ನಲ್ಲಿ 16 ಮಂದಿ ಮಹಿಳೆಯರು 141 ಪುರುಷರು ಸೇರಿ 257 ಮಂದಿ ನಾಮಪತ್ರ ಸಲ್ಲಿಸಿದ್ದು, ಜೆಡಿಎಸ್‍ನಲ್ಲಿ 14 ಮಂದಿ ಮಹಿಳೆಯರು, 222 ಪುರುಷರು ಸೇರಿ 236 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಬಿಎಸ್‍ಪಿಯಿಂದ 2 ಮಹಿಳೆಯರು, 20 ಪುರುಷರು ಸೇರಿ 22 ಮಂದಿ, ಸಿಪಿಐನಿಂದ ಇಬ್ಬರು ಪುರುಷರು, ಎನ್‍ಸಿಪಿಯಿಂದ ಒಬ್ಬ ಮಹಿಳೆ 15 ಮಂದಿ ಪುರುಷರು ಸೇರಿ 16 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷೇತರರ ಪೈಕಿ 92 ಮಹಿಳೆಯರು, 1621 ಮಂದಿ ಪುರುಷರು ಸೇರಿ 1713 ಮಂದಿ, ಇತರೆ ವಿಭಾಗದಲ್ಲಿ 121 ಮಹಿಳೆಯರು , 799 ಮಂದಿ ಪುರುಷರು ಸೇರಿ 920 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿಯಲ್ಲಿ ಬಂಡಾಯ ಅಭ್ಯರ್ಥಿಗಳ ಸಂಖ್ಯೆ 60ಕ್ಕೂ ಹೆಚ್ಚಿದ್ದು, ಕಾಂಗ್ರೆಸ್‍ನಲ್ಲಿ 25ಕ್ಕೂ ಹೆಚ್ಚು ಮಂದಿ ಇದ್ದಾರೆ. ಇಂದಿನಿಂದ ನಾಮಪತ್ರ ಪರಿಶೀಲನಾ ಕಾರ್ಯ ಆರಂಭವಾಗಿದ್ದು, ನಾಮಪತ್ರ ಹಿಂಪಡೆಯಲು ಏ.27ರವರೆಗೂ ಕಾಲಾವಕಾಶವಿದೆ. ಈ ಮಧ್ಯೆ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದರೆ ಅಧಿಕೃತ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.

ಬಿಜೆಪಿಯಲ್ಲಿ ಹೆಬ್ಬಾಳ, ಕೆ.ಆರ್.ಪುರಂ, ಪುಲಕೇಶಿನಗರ, ಬಸವನಗುಡಿ, ಗೋವಿಂದರಾಜನಗರ, ವಿಜಯನಗರ, ಯಲಹಂಕ, ದಾಸರಹಳ್ಳಿ, ಬೈಲಹೊಂಗಲ, ಬೆಳಗಾವಿ ಉತ್ತರ, ಹುಕ್ಕೇರಿ, ರಾಯಭಾಗ, ಸವದತ್ತಿ ಯಲ್ಲಮ್ಮ, ಅಗರಿ ಬೊಮ್ಮನಹಳ್ಳಿ, ಹಡಗಲಿ, ಸಂಡೂರು, ಬೀದರ್ ದಕ್ಷಿಣ, ಹನೂರು, ಶೃಂಗೇರಿ, ಕಡೂರು, ಬಂಟ್ವಾಳ, ಮಂಗಳೂರು ಉತ್ತರ, ಮೂಡಬಿದರೆ, ಪುತ್ತೂರು, ದಾವಣಗೆರೆ ಉತ್ತರ, ಜಗಳೂರು, ಕಲಘಟಗಿ, ಕುಂದಗೋಳು, ಅಳಂದ, ಸೇಡಂ, ಅರಕಲಗೂಡು, ಹಿರೇಕೆರೂರು, ಕೋಲಾರ, ಶ್ರೀನಿವಾಸಪುರ, ಗಂಗಾವತಿ, ಹುಣಸೂರು, ಕೃಷ್ಣರಾಜ, ಕೃಷ್ಣರಾಜನಗರ, ವರುಣ, ರಾಯಚೂರು ಗ್ರಾಮೀಣ, ಮಾಗಡಿ, ಶಿವಮೊಗ್ಗ ಗ್ರಾಮಾಂತರ, ಶಿರಾ, ಕಾರ್ಕಳ, ಕುಂದಾಪುರ, ಶೋರಾಪುರ ಕ್ಷೇತ್ರಗಳಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

ಸಕಲೇಶಪುರದಲ್ಲಿ ಬಂಡಾಯ ಹೆಚ್ಚಾಗಿ ಐದು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ರಾಣೆಬೆನ್ನೂರಿನಲ್ಲಿ ನಾಲ್ವರು ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಬಿಳಗಿ, ಖಾನಾಪುರ, ಯಮಕನ ಮರಡಿ, ಮೂಡಿಬಿದರೆ, ಮಾಲೂರು, ಕೊಪ್ಪಳ, ಲಿಂಗಸಗೂರು ಕ್ಷೇತ್ರಗಳಲ್ಲಿ ತಲಾ ಮೂರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಗೋಕಾಕ್, ರಾಮದುಗ, ಬಾದಾಮಿ, ಮುಳಬಾಗಿಲು, ಮೇಲುಕೋಟೆ, ಕುಣಿಗಲ ಕ್ಷೇತ್ರಕ್ಕೆ ಬಿಜೆಪಿ ಕೊನೆ ಕ್ಷಣದವರೆಗೂ ಅಭ್ಯರ್ಥಿಗಳ ಬಿ ಫಾರಂನ್ನು ಕೊಡಲು ವಿಳಂಬ ಮಾಡಿದ್ದರಿಂದ ಚುನಾವಣಾ ಆಯೋಗ ಅಲ್ಲಿ ಅಧಿಕೃತ ಅಭ್ಯರ್ಥಿಗಳನ್ನು ಪರಿಗಣಿಸಿಲ್ಲ. ಆದರೆ ಕೊನೆ ಕ್ಷಣದಲ್ಲಿ ಚುನಾವಣಾಧಿಕರಿಗೆ ಬಿ ಫಾರಂ ಸಲ್ಲಿಸಿರುವುದರಿಂದ ನಾಮಪತ್ರ ಪರಿಶೀಲನೆ ವೇಳೆ ಪಕ್ಷದ ಅಭ್ಯರ್ಥಿಗಳನ್ನು ಪರಿಗಣಿಸುವ ಸಾಧ್ಯತೆ ಇದೆ.

ಇನ್ನು ಕಾಂಗ್ರೆಸ್ ಪಕ್ಷದಿಂದ ರಾಜರಾಜೇಶ್ವರಿ ನಗರ, ಶಾಂತಿನಗರ, ಹೆಬ್ಬಾಳ, ಮಹಾಲಕ್ಷ್ಮಿ ಲೇಔಟ್, ಪದ್ಮನಾಭನಗರ, ದೊಡ್ಡಬಳ್ಳಾಪುರ, ಹೊಸಕೋಟೆ, ಯಶವಂತಪುರ, ಬೆಳಗಾಂ ದಕ್ಷಿಣ, ಕಾಗವಾಡ, ಕುಡಚಿ, ಸವದತ್ತಿ ಯಲ್ಲಮ್ಮ, ಬಳ್ಳಾರಿ ವಿಜಯನಗರ, ತರೀಕೆರೆ, ಹೊಸದುರ್ಗ, ಹುಬ್ಬಳ್ಳಿ-ಧಾರವಾಡ ಕೇಂದ್ರ, ವರುಣ, ಮಸ್ಕಿ, ತಿಪಟೂರು, ತುಮಕೂರು ನಗರ, ದೇವರಹಿಪ್ಪರಗಿ, ಬೈಂದೂರು, ಬಸವನಬಾಗೇವಾಡಿ, ಇಂಡಿಯಲ್ಲಿ ತಲಾ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ಪುಲಕೇಶಿನಗರ, ಶಿವಮೊಗ್ಗ ಗ್ರಾಮಾಂತರ, ಬಿಜಾಪುರ ನಗರ, ರಾಯಭಾಗ ತಲಾ ಮೂರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಮೇಲುಕೋಟೆಯಲ್ಲಿ ಕಾಂಗ್ರೆಸ್‍ನಿಂದ ಯಾರೂ ನಾಮಪತ್ರ ಸಲ್ಲಿಸಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ