ಬದಾಮಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿದರೆ ಪಕ್ಷದ ವತಿಯಿಂದ ಪ್ರಬಲ ಅಭ್ಯರ್ಥಿಯನ್ನೇ ನಾವು ಕಣಕ್ಕಿಳಿಸಲಿದ್ದೇವೆ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

ಚಿಕ್ಕಮಗಳೂರು,ಏ.22-ಬಾಗಲೋಟೆ ಜಿಲ್ಲೆ ಬದಾಮಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿದರೆ ಪಕ್ಷದ ವತಿಯಿಂದ ಪ್ರಬಲ ಅಭ್ಯರ್ಥಿಯನ್ನೇ ನಾವು ಕಣಕ್ಕಿಳಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾದಾಮಿಯಿಂದ ಸ್ಪರ್ಧಿಸುವುದಾಗಿ ಇಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನಾವು ಕೂಡ ಕಾರ್ಯ ತಂತ್ರದ ಭಾಗವಾಗಿ ಸ್ಪರ್ಧೆ ನೀಡುವಂತಹ ಅಭ್ಯರ್ಥಿಯನ್ನೇ ಅಖಾಡಕ್ಕಿಳಿಸಲಿದ್ದೇವೆ. ಗೆಲುವು ನಮ್ಮದೇ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಎಲ್ಲೇ ಸ್ಪರ್ಧಿಸಿದರೂ ಸೋಲು ಕಟ್ಟಿಟ್ಟ ಬುತ್ತಿ. ಮೊದಲು ವರುಣಾದಲ್ಲಿ ಸೋಲುತ್ತೇವೆ ಎಂಬುದು ಖಚಿತವಾದ ಕೂಡಲೇ ಚಾಮುಂಡೇಶ್ವರಿಯಲ್ಲಿ ಇದು ನನ್ನ ಕೊನೆಯ ಚುನಾವಣೆ ಎಂದು ಜನರ ಅನುಕಂಪ ಗಿಟ್ಟಿಸಲು ಮುಂದಾದರು. ಈಗ ಅಲ್ಲಿಯೂ ಕೂಡ ಪರಾಭವಗೊಳ್ಳುತ್ತೇನೆ ಎಂಬುದು ಖಚಿತವಾಗಿರುವುದರಿಂದ ಬಾದಾಮಿಗೆ ವಲಸೆ ಹೋಗುತ್ತಿದ್ದಾರೆ ಎಂದು ಟೀಕಿಸಿದರು.
ಬಾದಾಮಿಯಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಇದುವರೆಗೂ ಚರ್ಚೆಯಾಗಿಲ್ಲ. ಕನಿಷ್ಟ 5-6ಅಭ್ಯರ್ಥಿಗಳು ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಈ ಕ್ಷೇತ್ರವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸಂಜೆಯೊಳಗೆ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ