ರೆಬೆಲ್ ಸ್ಟಾರ್ ಅಂಬರೀಶ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರೆಬೆಲ್ ಆಗಿದ್ದೀರಾ…?

ಮೈಸೂರು,ಏ.21- ರೆಬೆಲ್ ಸ್ಟಾರ್ ಅಂಬರೀಶ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರೆಬೆಲ್ ಆಗಿದ್ದೀರಾ…?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಾತನಾಡಿದ ರೀತಿ ನೋಡಿದರೆ ರೆಬೆಲ್ ಆಗಿರುವಂತೆಯೇ ತೋರುತ್ತಿದೆ.
ರಾಮಕೃಷ್ಣನಗರದ ತಮ್ಮ ನಿವಾಸದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರು ಅಂಬರೀಶ್ ಅವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಅಂಬರೀಶ್‍ಗೆ ಬಿ ಫಾರಂ ಕೊಟ್ಟಾಗಿದೆ.ಚುನಾವಣೆಯಲ್ಲಿ ನಿಲ್ಲುವುದು, ಬಿಡುವುದು ಅವರಿಷ್ಟ. ಆದರೆ ಅವರನ್ನು ಭೇಟಿ ಮಾಡಲು ನಾನು ಹೋಗುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು.
ಬಿಜೆಪಿ ನಾಯಕರೇ ಮಹಾನ್ ಭ್ರಷ್ಟರು, ಮೊದಲು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ತಮ್ಮ ಮಗನ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ಅಮಿತ್ ಷಾ ಅವರಿಗೆ ನನ್ನ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದ ಅವರು, ಅಮಿತ್ ಷಾ ಜೈನ ಧರ್ಮೀಯರು. ಅವರು ಹಿಂದೂ ಎಂದು ಹೇಳಿಕೊಳ್ಳುತ್ತಾರೆ. ಇಂಥವರಿಗೆ ನನ್ನ ಧರ್ಮದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಬಿ.ಎಸ್.ಯಡಿಯೂರಪ್ಪ ಮೊದಲು ಶಿಕಾರಿಪುರದಲ್ಲಿ ನಿಂತು ಗೆಲ್ಲಲಿ ಆನಂತರ ನಾನು ಸ್ಪರ್ಧಿಸುವ ಕ್ಷೇತ್ರಗಳ ಬಗ್ಗೆ ಮಾತನಾಡಲಿ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದ ಎರಡು ಕಡೆ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದಾರೆ ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಎಚ್.ಡಿ.ಕುಮಾರಸ್ವಾಮಿ ಅವರು ಜನ ನಾಯಕರಲ್ಲವಾ? ಅವರೇಕೆ ಎರಡು ಕಡೆ ಸ್ಪರ್ಧಿಸುತ್ತಿದ್ದಾರೆ ಎಂದು ಮರು ಪ್ರಶ್ನೆ ಹಾಕಿದರು.
ನಾನು ಇಂದು ಬೆಂಗಳೂರಿಗೆ ಹೋಗುತ್ತೇವೆ. ನಂತರ ಹೈಕಮಾಂಡ್ ಜತೆ ಚರ್ಚಿಸಿ ಬಾದಾಮಿಯಲ್ಲಿ ಸ್ಪರ್ಧಿಸುವ ಕುರಿತು ತೀರ್ಮಾನಿಸುತ್ತೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ