ರಾಜ್ಯದಲ್ಲಿನ ಎಟಿಎಂಗಳೂ ಖಾಲಿ; ನಗದು ಅಭಾವದಿಂದ ಪರದಾಡುತ್ತಿರುವ ಜನತೆ!

 

ಬೆಂಗಳೂರು,ಏ.18

ರಾಜ್ಯದ ಎಟಿಎಂಗಳಲ್ಲೂ ನೋಟುಗಳ ಅಭಾವ ಉಂಟಾಗಿದೆ. ಅದರಲ್ಲೂ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲೇ ಈ ಸಮಸ್ಯೆ ಹೆಚ್ಚು. ದೇಶದ ಅತಿದೊಡ್ಡ ಬ್ಯಾಂಕ್‌ ಎಸ್‌ಬಿಐನ ಹಲವು ಎಟಿಎಂ ಕೇಂದ್ರಗಳಲ್ಲಿ ನೋ ಕ್ಯಾಶ್‌ ಫಲಕ ನೇತು ಹಾಕಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರ, ಪಟ್ಟಣಗಳ ಎಟಿಎಂ ಕೇಂದ್ರಗಳಲ್ಲಿ ನಗದು ಕೊರತೆ ಇದೆ. ಆದರೆ, ಕೊರತೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬೇಸಿಗೆ ನಂತರ ಮುಂಗಾರು ಹಂಗಾಮು ಸಂದರ್ಭದಲ್ಲಿ ಬೀಜ, ಗೊಬ್ಬರ ಖರೀದಿಯಂತಹ ಕೃಷಿ ಚಟುವಟಿಕೆಗಳಿಗಾಗಿ ಹಣವನ್ನು ಸಿದ್ಧವಾಗಿ ಇಟ್ಟುಕೊಳ್ಳುವುದು ಕೂಡ ನೋಟುಗಳ ಅಭಾವಕ್ಕೆ ಒಂದು ಕಾರಣ ಎನ್ನಲಾಗುತ್ತಿದೆ. ಇದು ಗ್ರಾಮೀಣ ಭಾಗದಲ್ಲಿ ಇರುವ ಸಮಸ್ಯೆ. ಆದರೆ ನಗರ ಪ್ರದೇಶದಲ್ಲಿ ಇದಕ್ಕೆ ಕಾರಣವೇನು ಎಂಬುದಕ್ಕೆ ಬ್ಯಾಂಕ್‌ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಸಿಗುತ್ತಿಲ್ಲ.
ನೋಟು ಅಮಾನ್ಯೀಕರಣದ ನಂತರ ಆಗಾಗ ನೋಟುಗಳ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ, ಮುಂಜಾಗ್ರತೆ ಕ್ರಮವಾಗಿ ಮನೆಯಲ್ಲಿ ಹಣ ಇಟ್ಟುಕೊಂಡಿರುವ ಸಾಧ್ಯತೆಯೂ ಇದೆ. ಮತ್ತೊಂದೆಡೆ ಚುನಾವಣೆ ಹತ್ತಿರವಿರುವ ಕಾರಣ ರಾಜಕೀಯ ಪಕ್ಷಗಳು ನಗದನ್ನು ಸ್ಟಾಕ್‌ ಮಾಡಿಕೊಂಡು, ಮತದಾನ ಒಂದೆರೆಡು ದಿನ ಇರುವಾಗ ಮತದಾರರಿಗೆ ಹಂಚಿಕೆ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ದೇಶದ ನಾನಾ ರಾಜ್ಯಗಳ ಎಟಿಎಂಗಳಲ್ಲಿ ನೋಟುಗಳ ಸಮಸ್ಯೆ ಎದುರಾಗಿರುವ ಕಾರಣ ಕೊರತೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಬ್ಯಾಂಕ್‌ಗಳಲ್ಲಿ ನಗದು ಕೊರತೆ ಇಲ್ಲ. ಎಟಿಎಂಗಳಲ್ಲೂ ಅಗತ್ಯ ಪ್ರಮಾಣದಷ್ಟು ಹಣವನ್ನು ತುಂಬಲಾಗುತ್ತಿದೆ. ಆದರೆ, ಕೆಲವು ಪ್ರದೇಶಗಳ ಎಟಿಎಂಗಳಲ್ಲಿ ಹಣದ ಕೊರತೆ ಇರುವುದು ನಿಜ. ಅಂತಹ ಎಟಿಎಂಗಳಿಗೆ ಶೀಘ್ರ ಹಣವನ್ನು ಭರ್ತಿ ಮಾಡುತ್ತೇವೆ,’’ ಎಂದು ಹೆಸರು ಹೇಳಲಿಚ್ಛಿಸದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ದಿಢೀರ್‌ ಹಣದ ಕೊರತೆಗೆ ಕಾರಣ ಗೊತ್ತಿಲ್ಲ. ಆದರೆ ಎಟಿಎಂಗಳಿಗೆ ಸರಬರಾಜು ಮಾಡುವ ಹಣದಲ್ಲಿ ಯಾವುದೇ ಕೊರತೆ ಇಲ್ಲ. ಪೂರೈಕೆ ಎಂದಿನಂತೆ ಇದೆ. ಎಟಿಎಂಗಳಲ್ಲಿ ನಗದು ಕೊರತೆಯ ಸಮಸ್ಯೆ ತಾತ್ಕಾಲಿಕವಾಗಿದ್ದು, ಶೀಘ್ರದಲ್ಲೇ ಎಲ್ಲ ಎಟಿಎಂಗಳಲ್ಲಿ ಹಣ ಲಭಿಸಲಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ,’’ ಎಂದು ಅವರು ಹೇಳಿದರು.
ಐನೂರು ಹಾಗೂ ಸಾವಿರ ರೂ. ನೋಟುಗಳ ನಿಷೇಧದ ನಂತರ ನೋಟುಗಳ ಕೊರತೆ ಆಗಾಗ ಕಾಣಿಸುತ್ತಲೇ ಇರುತ್ತದೆ. ಇತ್ತೀಚೆಗೆ ಹಲವು ಎಟಿಎಂಗಳಲ್ಲಿ ನೋಟು ಸಮಸ್ಯೆ ಇರುವುದು ನಿಜ. ಹಣವನ್ನು ಎಟಿಎಂಗಳ ನಡುವೆ ಸೂಕ್ತ ಹಂಚಿಕೆಯಲ್ಲಿ ವ್ಯತ್ಯಾಸ ಉಂಟಾಗಿ ಆಗಿರಬಹುದು ಅಥವಾ ಬೇರೆ ಕಾರಣಗಳು ಇರಬಹುದು. ಸ್ಪಷ್ಟ ಮಾಹಿತಿ ಲಭ್ಯವಿಲ್ಲ,’’ ಎಂದು ಕೆನರಾ ಬ್ಯಾಂಕ್‌ ನೌಕರರ ಸಂಘದ ಪದಾಧಿಕಾರಿ ಪುರುಷೋತ್ತಮ ಹೇಳಿದರು.
ಬೆಂಗಳೂರಿನಲ್ಲಿ ಹದಿನೈದು ದಿನಗಳ ಹಿಂದೆ ಇದೇ ಸಮಸ್ಯೆ ಕಂಡು ಬಂದಿತ್ತು. ಆಗ ಇದಕ್ಕಿಂತಲೂ ಹೆಚ್ಚಿನ ಎಟಿಎಂಗಳಲ್ಲಿ ಹಣದ ಕೊರತೆ ಕಂಡು ಬಂದಿತ್ತು. ನೋಟು ಪ್ರಮಾಣ ಕಡಿಮೆ ಇರುವುದರಿಂದ ಲಭ್ಯತೆ ಆಧಾರದ ಮೇಲೆ ಪೂರೈಕೆ ಮಾಡಲಾಗುತ್ತಿದೆ. ಸಮಸ್ಯೆ ಇರುವ ಕಡೆ ನಗದು ವ್ಯವಸ್ಥೆ ಮಾಡಲಾಗುತ್ತಿದೆ. ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳುವುದಾಗಿ ಬ್ಯಾಂಕ್‌ ಅಧಿಕಾರಿಗಳು ಹೇಳುತ್ತಾರೆ. ಇಷ್ಟಾದರೂ ಜನರು ತಮ್ಮ ಖಾತೆಯಲ್ಲಿರುವ ಹಣ ತೆಗೆಯಲು ಒಂದು ಎಟಿಎಂನಿಂದ ಮತ್ತೊಂದು ಎಟಿಎಂಗೆ ಅಲೆಯುವುದು ತಪ್ಪುತ್ತಿಲ್ಲ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ