ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ: ಚುನಾವಣಾ ಪೂರ್ವ ಸಮೀಕ್ಷೆಗಳ ವರದಿ ಹಿನ್ನಲೆ: ಅಮಿತ್ ಷಾರಿಂದ 11 ಸದಸ್ಯರ ತಂಡ ರಚನೆ

ಬೆಂಗಳೂರು, ಏ.18- ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಚುನಾವಣಾ ಪೂರ್ವ ಸಮೀಕ್ಷೆಗಳ ವರದಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಚಾಣಾಕ್ಯ ಅಮಿತ್ ಷಾ 11 ಸದಸ್ಯರ ತಂಡವನ್ನು ರಚಿಸಿದ್ದಾರೆ.

ಚುನಾವಣೆ ಮುಗಿಯುವವರೆಗೂ ಅಮಿತ್ ಷಾ ಅವರ ಈ ತಂಡ ರಾಜ್ಯದ ನಾನಾ ಕಡೆ ವಾಸ್ತವ್ಯ ಹೂಡಲಿದ್ದು, ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸಲಿದೆ.
ಈ ಹಿಂದೆ ಉತ್ತರ ಪ್ರದೇಶ, ಉತ್ತರಖಂಡ್, ತ್ರಿಪುರ ಸೇರಿದಂತೆ ದೇಶದ ನಾನಾ ಭಾಗದಲ್ಲಿ ನಡೆದ ಚುನಾವಣಾ ವೇಳೆ ಈ ತಂಡವು ಪಕ್ಷದ ಪರ ಕೆಲಸ ಮಾಡಿದ್ದರಿಂದ ಗೆಲುವು ಸಾಧ್ಯವಾಗಿತ್ತು.

ಇದೀಗ ರಾಜ್ಯಕ್ಕೂ ಆಗಮಿಸಿರುವ ಈ ತಂಡ ರಾಜಧಾನಿ ಬೆಂಗಳೂರು, ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ ಹೈದರಾಬಾದ್ ಹಾಗೂ ಮುಂಬೈ ಕರ್ನಾಟಕ ಸೇರಿದಂತೆ ಮತ್ತಿತರ ಕಡೆ ಅಲ್ಲಿನ ಸ್ಥಿತಿಗತಿ, ವಿರೋಧ ಪಕ್ಷಗಳ ದೌರ್ಬಲ್ಯದ ಮಾಹಿತಿ ಸಂಗ್ರಹಿಸಿ ಚುನಾವಣಾ ಪ್ರಚಾರ ಸೇರಿದಂತೆ ನಾನಾ ರೀತಿಯ ರಣತಂತ್ರವನ್ನು ರೂಪಿಸಲಿದ್ದಾರೆ.

ಇವರು ನೀಡುವ ಸಲಹೆ, ಮಾರ್ಗದರ್ಶನದ ಮೇರೆಗೆ ಪ್ರಚಾರ ನಡೆಯಲಿದೆ.

ಯಾವ ಯಾವ ತಂಡ :
1. ಮಂಗಲಪಾಂಡ್ಯ
ಬಿಹಾರದ ಆರೋಗ್ಯ ಸಚಿವ ಮಂಗಲಪಾಂಡ್ಯ ಇವರು ಮಧ್ಯ ಕರ್ನಾಟಕದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

2. ಸತೀಶ್ ಉಪಾಧ್ಯಾಯ
ದೆಹಲಿ ಬಿಜೆಪಿ ಶಾಸಕರಾಗಿರುವ ಸತೀಶ್ ಉಪಾಧ್ಯಾಯ ಸಂಘಟನೆಯ ಚತುರನೆಂದೇ ಪಕ್ಷದ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಹಳೇ ಮೈಸೂರು ಭಾಗದ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಹಾಸನ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

3. ಸಿ.ಆರ್.ಪಾಟೀಲ್
ಗುಜರಾತ್‍ನ ಸಂಸದರಾಗಿರುವ ಸಿ.ಆರ್.ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ನಂಬಿಕಸ್ಥ. ಇವರನ್ನು ಕರ್ನಾಟಕದಲ್ಲಿ ಮೈಸೂರು ವಿಭಾಗಕ್ಕೆ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

4.ಓಂ ಪ್ರಕಾಶ್ ಮಾಥುರ್
ರಾಜಸ್ಥಾನದ ಸಂಸದರಾಗಿರುವ ಓಂಪ್ರಕಾಶ್ ಮಾಥುರ್ ಕೂಡ ಪಕ್ಷ ವಹಿಸಿರುವ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲೂ ಪಕ್ಷದ ಪರ ಕೆಲಸ ಮಾಡಿದ ಅನುಭವವಿದೆ. ಕರಾವಳಿ ಜಿಲ್ಲೆಗಳ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ.

5. ಮಹೇಂದ್ರ ಸಿಂಗ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಚಿವರಾಗಿರುವ ಮಹೇಂದ್ರ ಸಿಂಗ್ ಅವರಿಗೆ ಕರಾವಳಿ ಜಿಲ್ಲೆಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದೆ.

6. ರಾಮ್ ಮಾಧವ್
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಘಟನೆಯ ಚತುರನೆಂದೇ ಕರೆಯಲ್ಪಡುವ ಎಂಥದ್ದೇ ಕ್ಲಿಷ್ಟಕರ ಪರಿಸ್ಥಿತಿಯನ್ನು ತನ್ನ ಚಾಕಚಕ್ಯತೆಯಿಂದಲೇ ನಿಭಾಯಿಸುವ ರಾಮ್ ಮಾಧವ್ ಹೆಗಲಿಗೆ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದೆ.
ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಾಗಲಕೋಟೆ, ವಿಜಾಪುರ ಮತ್ತು ಕಲ್ಬುರ್ಗಿ ಜಿಲ್ಲೆಗಳ ಹೊಣೆಗಾರಿಕೆ ನೋಡಿಕೊಳ್ಳುವರು.

7.ಸತ್ಯೇಂದ್ರ ದೇವ್‍ಸಿಂಗ್
ಉತ್ತರ ಪ್ರದೇಶದ ಪ್ರಮುಖ ಬಿಜೆಪಿ ನಾಯಕರಾಗಿರುವ ಸತ್ಯೇಂದ್ರ ದೇವಸಿಂಗ್ ಹೈದರಾಬಾದ್ ಕರ್ನಾಟಕದಲ್ಲಿ ರಾಮ್‍ಮಾಧವ್ ಜೊತೆ ಕೈ ಜೋಡಿಸಲಿದ್ದಾರೆ.

8. ಭೂಪೇಂದ್ರ ಯಾದವ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ನಂಬಿಕಸ್ಥರಾಗಿರುವ ಭೂಪೇಂದ್ರ ಯಾದವ್ ಅವರನ್ನು ಮುಂಬೈ ಕರ್ನಾಟಕಕ್ಕೆ ನೇಮಿಸಲಾಗಿದೆ. ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

9. ಚಂದ್ರಕಾಂತ ದಾದಾ ಪಾಟೀಲ್
ಮಹಾರಾಷ್ಟ್ರದ ಬಿಜೆಪಿಯ ಪ್ರಮುಖ ನಾಯಕರಾಗಿರುವ ಚಂದ್ರಕಾಂತ್ ದಾದಾ ಪಾಟೀಲ್ ಮುಂಬೈ ಕರ್ನಾಟಕದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವರು.

10. ಆಸೀಸ್ ಸೆಲ್ಲಾರ್
ಮುಂಬೈ ಮಹಾನಗರದ ಬಿಜೆಪಿ ಅಧ್ಯಕ್ಷರಾಗಿರುವ ಆಸೀಸ್ ಸೆಲ್ಲಾರ್ ಅವರನ್ನು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನಾಗಿ ಮಾಡಲಾಗಿದೆ.

11. ಗೋಪಾಲ ಶೆಟ್ಟಿ
ಮಹಾರಾಷ್ಟ್ರದ ಶಾಸಕರಾಗಿರವ ಗೋಪಾಲ ಶೆಟ್ಟಿ ಅವರಿಗೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ