ಸ್ವಜನ ಪಕ್ಷಪಾತ, ಅಧಿಕಾರ ದರ್ಪದಿಂದ ಡಿಕೆಎಸ್ ಬ್ರದರ್ಸ್ ನನಗೆ ಟಿಕೆಟ್ ತಪ್ಪಿಸಿದ್ದಾರೆ – ಬಿ.ಬಿ.ರಾಮಸ್ವಾಮಿಗೌಡ

ಕುಣಿಗಲ್, ಏ.17- ಸ್ವಜನ ಪಕ್ಷಪಾತ, ಅಧಿಕಾರ ದರ್ಪದಿಂದ ಡಿಕೆಎಸ್ ಬ್ರದರ್ಸ್ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ನನಗೆ ನೀಡಿರುವ ಕಿರುಕುಳದ ಬಗ್ಗೆ ರಾಜ್ಯದ ಜನತೆಗೆ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತೇನೆ ಎಂದು ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಅಳಲು ತೋಡಿಕೊಂಡರು.
ತಮ್ಮ ಕಾಂಗ್ರೆಸ್ ಕಚೇರಿ ನಮ್ಮ ಮನೆಯಲ್ಲಿ ಅವರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. 42 ವರ್ಷಗಳಿಂದ ಮನೆ-ಮಠ , ಆಸ್ತಿ ಎಲ್ಲವನ್ನು ಮಾರಿ ಪಕ್ಷಕ್ಕಾಗಿ ದುಡಿದಿದ್ದೇನೆ. ಯಾವುದೇ ಸಾರ್ವಜನಿಕರ ಹಣವನ್ನು ದೋಚಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ಕುತಂತ್ರದಿಂದಾಗಿ ನಿನ್ನೆ , ಮೊನ್ನೆ ಕ್ಷೇತ್ರಕ್ಕೆ ಕಾಲಿಟ್ಟ ವ್ಯಕ್ತಿಗೆ ಟಿಕೆಟ್ ನೀಡಿ ನಿಜವಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು ಟಿಕೆಟ್ ನೀಡೇ ನೀಡುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾರೆ. ಮುಂಚಿತವಾಗಿಯೇ ನನಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದರೆ ನಾನು ಪ್ರಯತ್ನಿಸುತ್ತಿರಲಿಲ್ಲ. ಆದರೆ ಇವರ ಮೋಸಕ್ಕೆ ನಾನು ಬಲಿಯಾಗಿದ್ದೇನೆ. ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಕುಣಿಗಲ್ ಅನ್ನು ನಾನು ಕಟ್ಟೆ ಬೆಳೆಸಿದ್ದೇನೆ. ಪಕ್ಷವನ್ನು ಅನಾಥ ಮಾಡುವುದಿಲ್ಲ ಎಂದರು.
ತಮ್ಮ ನಡೆಯ ಬಗ್ಗೆ ಬೆಂಬಲಿಗರೊಂದಿಗೆ ಚರ್ಚಿಸಿ ಬಂಡಾಯವಾಗಿ ಅಥವಾ ಪಕ್ಷೇತರವಾಗಿ ನಿಲ್ಲಬೇಕು , ನಿಲ್ಲಬೇಡವೋ ಎಂಬ ಬಗ್ಗೆ ಕಾರ್ಯಕರ್ತರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.
ಈ ವೇಳೆ ಕಾಂಗ್ರೆಸ್ ಮಾಜಿ ಬ್ಲಾಕ್ ಅಧ್ಯಕ್ಷ ಎಂ.ಎನ್.ಶಿವಣ್ಣ ಗೌಡ, ಮುಖಂಡರಾದ ತುವೇಕೆರೆ ರಾಜು, ಹರೀಶ್, ಇಂದ್ರ, ಪ್ರದೀಪ್, ರಾಜಗೇರೆ ರಾಮಣ್ಣ ಮುಂತಾದವರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ