ಸಾಮಾಜಿಕ ಸೌಹಾರ್ದತೆ ಕದಡುತ್ತಿರುವ ಕೋಮು ಶಕ್ತಿಗಳಿಗೆ ಉಪ ರಾಷ್ಟ್ರಪತಿ ಡಾ. ಎಂ. ವೆಂಕಯ್ಯ ನಾಯ್ಡು ಗಂಭೀರ ಎಚ್ಚರಿಕೆ:

ನವದೆಹಲಿ, ಏ.15-ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಸಾಮಾಜಿಕ ಸೌಹಾರ್ದತೆ ಕದಡುತ್ತಿರುವ ಕೋಮು ಶಕ್ತಿಗಳಿಗೆ ಉಪ ರಾಷ್ಟ್ರಪತಿ ಡಾ. ಎಂ. ವೆಂಕಯ್ಯ ನಾಯ್ಡು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರದ ಕತುವಾದಲ್ಲಿ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕಗ್ಗೊಲೆ ಪ್ರಕರಣದ ನಂತರ ಕಂಡು ಬಂದಿರುವ ಬೆಳವಣಿಗೆಗಳನ್ನು ನಾಯ್ಡು ಪ್ರಸ್ತಾಪಿಸಿ ಕಳವಳ ವ್ಯಕ್ತಪಡಿಸಿದರು.
ರಾಜಧಾನಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಿನ್ನೆ ರಾತ್ರಿ ಡಾ. ಬಾಬಾಸಾಹೇಬ್ ಅಂಬೇಡ್ಕರ್-ವ್ಯಕ್ತಿ ನಹಿ ಸಂಕಲ್ಪ್ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶದಲ್ಲಿನ ವಿವಿಧ ದುಷ್ಟಶಕ್ತಿಗಳು ತಮ್ಮ ಸಂಕುಚಿತ ರಾಜಕೀಯ ಲಾಭಗಳಿಗಾಗಿ ದೇಶವನ್ನು ಒಡೆಯಲು ಯತ್ನಿಸುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.
ರಾಷ್ಟ್ರೀಯವಾದಿ ಎಂದರೆ ದೇಶದಲ್ಲಿನ ಎಲ್ಲರನ್ನೂ ಗೌರವಿಸುವ ವ್ಯಕ್ತಿ. ದೇಶವೆಂದರೆ ಈ ಭೂಮಿಯಲ್ಲಿ ವಾಸಿಸುವ ಎಲ್ಲ ಜೀವಿಗಳು ಎಂದರ್ಥ ಎಂದು ವ್ಯಾಖ್ಯಾನಿಸಿದ ಅವರು, ಪರಸ್ಪರರನ್ನು ಗೌರವಿಸದ ಹೊರತು ಯಾರನ್ನೂ ಓರ್ವ ರಾಷ್ಟ್ರೀಯವಾದಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಜಾತೀಯತೆಯಿಂದ ದೇಶದ ಸಾಮಾಜಿಕ, ಮತ್ತು ಆರ್ಥಿಕ ಅಭಿವೃದ್ದಿಗೆ ಧಕ್ಕೆಯಾಗಿದೆ. ಈ ಪಿಡುಗು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ