ನನ್ನ ವಿರುದ್ದ ಆದ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಷಡ್ಯಂತ್ರ : ಶ್ರೀರಾಮುಲು

ಚಿತ್ರದುರ್ಗ,ಏ.13- ಮೊಳಕಾಲ್ಮೂರಿನ ನಾಯಕನಹಟ್ಟಿಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ನನ್ನ ವಿರುದ್ದ ಆದ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಇದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಶ್ರೀರಾಮುಲು ಗಲಾಟೆಯ ಮೂಲಕ ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅವರು ಇಂದು ನಾಯಕನಹಟ್ಟಿಗೆ ಆಮಿಸಿದ ಸಂದರ್ಭದಲ್ಲಿ ಆ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಅಭ್ಯರ್ಥಿ ತಿಪ್ಪೇಸ್ವಾಮಿ ಬೆಂಬಲಿಗರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರಲ್ಲದೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೆÇಲೀಸರು ಲಘು ಲಾಠಿ ಪ್ರಹಾರ ಮಾಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ನನ್ನನ್ನು ಬೇರೆ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗದಂತೆ ಕಾಂಗ್ರೆಸ್ ಕಟ್ಟಿ ಹಾಕುವ ಪ್ರಯತ್ನವನ್ನು ಮಾಡುತ್ತಿದೆ. ನನ್ನನ್ನು ಯಾರಿಂದಲೂ ಕಟ್ಟಿ ಹಾಕಲು ಸಾದ್ಯವಿಲ್ಲ. ನಾನು ಈ ಪರಿಸ್ಥಿತಿಯನ್ನು ನಿಭಾಯಿಸುತ್ತೇನೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜಕೀಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ನನ್ನನ್ನು ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಯಾರೋ ಕೆಲವರು ಇಲ್ಲಿ ಈ ರೀತಿ ವರ್ತಿಸಿದ್ದಾರೆ. ಈ ಕ್ಷೇತ್ರದ ಎಲ್ಲರೂ ನನ್ನ ಪರವಾಗಿದ್ದಾರೆ .ಕಳೆದ ಬಾರಿ ಚುನಾವಣೆಯಲ್ಲಿ ತಿಪ್ಪೇಸ್ವಾಮಿ ಅವರನ್ನು ನಾವೇ ಗೆಲ್ಲಿಸಿದ್ದು ಎಂದರು.

ಇಂತಹ ಗಲಾಟೆ, ಪ್ರತಿಭಟನೆಗಳನ್ನು ನಾವು ಎದುರಿಸುತ್ತೇವೆ. ಇಲ್ಲಿ ಚುನಾವಣೆಯನ್ನು ಗೆಲ್ಲುತ್ತೇವೆ. ಇದಕ್ಕೆಲ್ಲ ಹೆದರಿ ಹೋಗುವ ಜಾಯಮಾನ ನಮ್ಮದಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ