ಕಾವೇರಿ ನೀರು ನಿರ್ವಹಣ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡು ಪ್ರತಿಭಟನೆಗೆ ವಿರೋಧ: ಕನ್ನಡ ಪರ ಸಂಘಟನೆಯಿಂದ ರಾಜಭವನ ಮುತ್ತಿಗೆ ಯತ್ನ; ವಾಟಾಳ್ ನಾಗರಾಜ್ ಸೇರಿ ಹಲವರ ಬಂಧನ

ಬೆಂಗಳೂರು,ಏ.12-ಕಾವೇರಿ ನೀರು ನಿರ್ವಹಣ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡು ನಡೆಸುತ್ತಿರುವ ಪ್ರತಿಭಟನೆ ವಿರೋಧಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ ಮುಖಂಡರು ಇಂದು ರಾಜಭವನ ಮುತ್ತಿಗೆ ಯತ್ನ ನಡೆಸಿದ ಸಂದರ್ಭದಲ್ಲಿ ಪೆÇಲೀಸರು ಬಂಧಿಸಿದರು.

ಸಾ.ರಾ.ಗೋವಿಂದ್, ಕೆ.ಆರ್.ಕುಮಾರ್, ಮಂಜುನಾಥ್.ಕೆ, ಎಚ್.ವಿ.ಗಿರೀಶ್, ಪ್ರವೀಣ್‍ಕುಮಾರ್ ಶೆಟ್ಟಿ , ಶಿವರಾಮೇಗೌಡ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ತಮಿಳುನಾಡು ಧೋರಣೆ ಖಂಡಿಸಿ ರಾಜಭವನ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಪೆÇಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಯಾವುದೇ ಕಾರಣಕ್ಕೂ ಆಗಬಾರದು, ಸುಪ್ರೀಂಕೋರ್ಟ್ ಆಗಲಿ ಕೇಂದ್ರ ಸರ್ಕಾರವಾಗಲಿ ಈ ಬಗ್ಗೆ ಯಾವುದೇ ತೀರ್ಮಾನ ಮಾಡದಿದ್ದರೂ ತಮಿಳುನಾಡು ಬಂದ್ ಮತ್ತು ಪ್ರತಿಭಟನೆ ಮೂಲಕ ಬ್ಲಾಕ್‍ಮೇಲ್ ರಾಜಕಾರಣ ಮಾಡುತ್ತಿದೆ ಎಂದರು.

ಅಲ್ಲಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹೋರಾಟಗಾರರು ಈ ವಿಚಾರವನ್ನು ರಾಜಕೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹೊಸ ಪಕ್ಷಗಳನ್ನು ಕಟ್ಟಿರುವ ಚಿತ್ರನಟರಾದ ರಜನಿ ಕಾಂತ್, ಕಮಲ್ ಹಾಸನ್ ಅವರು ರಾಜಕೀಯ ನಾಟಕವಾಡುತ್ತಿದ್ದಾರೆ. ಇದರ ವಿರುದ್ದ ನಾವು ಕೂಡ ಇದೇ 16ರಂದು ಅತ್ತಿಬೆಲೆ ಗಡಿ ಬಂದ್ ಮಾಡುವ ಮೂಲಕ ಭಾರೀ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ ಕಾವೇರಿ ಪರವಾಗಿ ಹೋರಾಟ ಮಾಡುವವರು ಇಲ್ಲದಂತಾಗಿದ್ದು , ದುರದೃಷ್ಟಕರವಾಗಿದೆ. ತಮಿಳುನಾಡು, ಪಾಂಡಿಚೇರಿ, ನಿರಂತರ ಹೋರಾಟ ನಡೆಯುತ್ತಿದೆ. ಆದರೆ ನಾವು ಹೋರಾಟ ಮಾಡಲು ಮುಂದಾದರೆ ನಮ್ಮ ವಿರುದ್ದ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಾರೆ ಎಂದು ವಾಟಾಳ್ ಬೇಸರ ವ್ಯಕ್ತಪಡಿಸಿದರು.

ಕವಿಗಳು, ಸಾಹಿತಿಗಳು, ಬರಹಗಾರರು, ಬುದ್ದಿಜೀವಿಗಳು ಮಾತನಾಡದೆ ಮೌನ ವಹಿಸಿದ್ದಾರೆ. ಲೋಕಸಭೆಯಲ್ಲಿ ಈ ವಿಷಯವಾಗಿ ಧನಿ ಎತ್ತಬೇಕಾದ ಸಂಸದರು ಮೌನಕ್ಕೆ ಶರಣಾಗಿದಾರೆ. ಅವರಿಗೆ ನಮ್ಮ ನೆಲ-ಜಲದ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.
ಮಾಜಿ ಪ್ರಧಾನಿ ದೇವೇಗೌಡರನ್ನು ಹೊರತುಪಡಿಸಿ ಎಲ್ಲ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ವಾಟಾಳ್ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ