ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎತ್ತೊಂದು ಸ್ಥಳದಲ್ಲೆ ಸಾವು:

ಬೇಲೂರು, ಏ.12- ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎತ್ತೊಂದು ಸ್ಥಳದಲ್ಲೆ ಸಾವನ್ನಪಿರುವ ಘಟನೆ ತಾಲೂಕಿನ ಕೋರಲಗದ್ದೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಅರೇಹಳ್ಳಿ ಹೋಬಳಿಯ ಕೋರಲ ಗದ್ದೆ ಗ್ರಾಮದ ಚನ್ನರಾಜು ಎಂಬುವವರು ತಮ್ಮ ಎರಡು ಎತ್ತುಗಳಿಗೆ ಕೆರೆಯಲ್ಲಿ ನೀರು ಕುಡಿಸಿ ಮನೆಗೆ ಹೊಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಗ್ರಾಮದ ಸಮೀಪ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ಗಮನಕ್ಕೆ ಬಂದಿಲ್ಲ.
ಈ ಸಂದರ್ಭದಲ್ಲಿ ಒಂದು ಎತ್ತಿನ ಕಾಲಿಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೆ ಕುಸಿದು ಬಿದ್ದಿದೆ. ಒಂದು ಎತ್ತು ಕುಸಿದು ಬಿದ್ದಿದ್ದನ್ನು ಗಮನಿಸಿದ ಚನ್ನರಾಜು ಎತ್ತಿನ ಬಾಲ ಹಿಡಿದು ಏಳಿಸಲು ಹೋದ ಸಂದರ್ಭದಲ್ಲಿ ಚನ್ನರಾಜು ಅವರಿಗೂ ಚಿಕ್ಕದಾಗಿ ವಿದ್ಯುತ್ ಶಾಕ್ ಆಗಿದೆ. ತಕ್ಷಣವೆ ದೂರಕ್ಕೆ ಹಾರಿ ಬಿದ್ದು, ಮತ್ತೊಂದು ಎತ್ತನ್ನು ಓಡಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯುತ್ ತಂತಿ ತಗುಲಿ ಎತ್ತು ಸಾವನ್ನಪ್ಪಿರುವ ವಿಷಯ ತಿಳಿದ ಗ್ರಾಮಸ್ಥರು, ಚೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ತಂತಿಯನ್ನು ಸರಿಪಡಿಸಿದ್ದಾರೆ.
ಸ್ಥಳಕ್ಕೆ ಚೆಸ್ಕಾಂ ಜೆಇ ರೇವಣ್ಣ ಹಾಗೂ ಪಶು ವೈದ್ಯಾಧಿಕಾರಿ ಗಂಗಾಧರ್ ಮತ್ತು ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಅರೇಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಂತರ ಎತ್ತಿನ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ