ಉಭಯ ಸದನಗಳ ಕಲಾಪ ಮುಂದೂಡಿಕೆ: ಒಂಬತ್ತು ದಿನಗಳಿಂದ ವ್ಯೆರ್ಥ ಕಲಾಪ

ನವದೆಹಲಿ, ಮಾ.15-ಬಹುಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣ, ಕಾವೇರಿ ಜಲ ವಿವಾದ, ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತು ರಾಜ್ಯಸಭೆಯಲ್ಲಿ ಇಂದೂ ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ ಉಭಯ ಸದನಗಳ ಕಲಾಪ ಮುಂದೂಡಲಾಗಿದೆ. ಇದರೊಂದಿಗೆ ಸತತ 9ನೇ ದಿನಗಳಿಂದ ಯಾವುದೇ ವಿಷಯದ ಚರ್ಚೆಗೆ ಆಸ್ಪದವಾಗಿಲ್ಲ. ಮಾ.5ರಿಂದಲೂ ಉಭಯ ಸದನಗಳಲ್ಲಿ ಯಾವುದೇ ಕಲಾಪ ನಡೆಯದೇ ಅದೇರಾಗ-ಅದೇ ಹಾಡು ಮುಂದುವರಿದಂತಾಗಿದೆ.
ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ಟಿಎಂಸಿ ಪಿಎನ್‍ಬಿ ಬ್ಯಾಂಕ್ ಹಗರಣ ವಿಷಯ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿತು. ಇದೇ ವೇಳೆ ಎನ್‍ಡಿಎ ಮಿತ್ರ ಪಕ್ಷ ಟಿಡಿಪಿ ಮತ್ತು ಟಿಆರ್‍ಎಸ್ ಸದಸ್ಯರು ಆಂಧ್ರಪ್ರದೇಶಕ್ಕಾಗಿ ವಿಶೇಷ ಪ್ಯಾಕೇಜ್‍ಗಾಗಿ ತಮ್ಮ ಬೇಡಿಕೆಯನ್ನು ಯಥಾ ಪ್ರಕಾರ ಮುಂದುವರಿಸಿದರು. ಇನ್ನೊಂದೆಡೆ ಎಐಎಡಿಎಂಕೆ ಮತ್ತು ಡಿಎಂಕೆ ಸದಸ್ಯರು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಪಟ್ಟು ಹಿಡಿದು ಧರಣಿ ನಡೆಸಿದರು.
ಕಳೆದ ಎಂಟು ದಿನಗಳಿಂದ ಕಲಾಪಕ್ಕೆ ಅಡ್ಡಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಸುಮಿತ್ರ ಮಹಾಜನ್ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಮತ್ತೆ ಮತ್ತೆ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದರು. ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಸಹ ಪ್ರತಿಭಟನಾ ಸದಸ್ಯರಲ್ಲಿ ಮಾಡಿಕೊಂಡ ಮನವಿ ಫಲ ನೀಡಲಿಲ್ಲ. ಪ್ರತಿಭಟನಾನಿರತ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳಕ್ಕೆ ಧಾವಿಸಿ ಧರಣಿ ನಡೆಸಿದರು. ಸದಸ್ಯರನ್ನು ಸಮಾಧಾನಗೊಳಿಸಲು ಯತ್ನಿಸಿ ವಿಫಲರಾದ ಸುಮಿತ್ರಾ ಮಹಾಜನ್ ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಿದರು. ಪುನಃ ಕಲಾಪ ಸಮಾವೇಶಗೊಂಡಾಗ ಅದೇ ಪರಿಸ್ಥಿತಿ ಮುಂದುವರಿದ ಕಾರಣ ಸದನವನ್ನು ನಾಳೆಗೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲೂ ಅದೇ ರಾಗ ಅದೇ ಹಾಡು :
ಸಂಸತ್ತಿನ ಮುಂದುವರೆದ ಬಜೆಟ್ ಅಧಿವೇಶನದ ಒಂಭತ್ತನೆ ದಿನವೂ ವಿವಿಧ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ಹಗರಣ ಹಾಗೂ ಕಾವೇರಿ ಜಲವಿವಾದ ವಿಷಯಗಳು ಕಲಾಪವನ್ನು ಬಲಿ ತೆಗೆದುಕೊಂಡಿವೆ. ಕಾಂಗ್ರೆಸ್ ಮತ್ತು ಟಿಎಂಸಿ ಸದಸ್ಯರು ಪಿಎನ್‍ಬಿ ಹಗರಣ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ಟಿಡಿಪಿ ಸದಸ್ಯರು ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಬಿಗಿಪಟ್ಟು ಮುಂದುವರಿಸಿದರು. ಇದರಿಂದಾಗಿ ಸದನದಲ್ಲಿ ಭಾರೀ ಗದ್ದಲ-ಕೋಲಾಹಲ ನಿರ್ಮಾಣವಾಯಿತು. ಪ್ರತಿಭಟನಾನಿರತ ಸದಸ್ಯರನ್ನು ಸಮಾಧಾನಪಡಿಸಲು ಸಭಾಪತಿ ವೆಂಕಯ್ಯ ನಾಯ್ಡು ಪುನರಾವರ್ತಿತ ಮನವಿ ಮಾಡಿದರೂ ಪರಿಸ್ಥಿತಿ ತಿಳಿಗೊಳ್ಳಲಿಲ್ಲ. ಇದರಿಂದ ಬೇಸತ್ತ ನಾಯ್ಡು ಅವರು ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಿದರು. ಮತ್ತೆ ಕಲಾಪ ಸಮಾವೇಶಗೊಂಡಾಗಲೂ ಗದ್ದಲ ಮುಂದುವರೆಯಿತು. ಟಿಎಂಸಿ, ಎಐಎಡಿಎಂಕೆ, ಡಿಎಂಕೆ ಮತ್ತು ಟಿಡಿಪಿ ಸದಸ್ಯರು ತಮ್ಮತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಧರಣಿ ಮುಂದುವರೆಸಿದ್ದರಿಂದ ಸಭಾಪತಿಯವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ