ಬಾಗಿಲು ಹಾಕುವ ವೇಳೆ ಸಿನಿಮೀಯ ರೀತಿ ಚಿನ್ನಾಭರಣದ ಅಂಗಡಿಗೆ ನುಗ್ಗಿದ ಐದು ಮಂದಿ ದರೋಡೆಕೋರರ ತಂಡ

ನೆಲಮಂಗಲ, ಮಾ.6- ಬಾಗಿಲು ಹಾಕುವ ವೇಳೆ ಸಿನಿಮೀಯ ರೀತಿ ಚಿನ್ನಾಭರಣದ ಅಂಗಡಿಗೆ ನುಗ್ಗಿದ ಐದು ಮಂದಿ ದರೋಡೆಕೋರರ ತಂಡ ಮಚ್ಚು, ಲಾಂಗ್‍ಗಳಿಂದ ಬೆದರಿಸಿ ಮಾಲೀಕನಿಗೆ ಹಲ್ಲೆ ಮಾಡಿ ಸುಮಾರು 700 ಗ್ರಾಂನಷ್ಟು ಆಭರಣ ದೋಚಿ ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿ ವ್ಯಾಪ್ತಿಯ ಮಾಗಡಿ ರಸ್ತೆ, ಮಾಚೋಹಳ್ಳಿಯಲ್ಲಿ ರಾಜಸ್ಥಾನ ಮೂಲದ ಚಂದುರಾಮ್ ಎಂಬುವವರಿಗೆ ಸೇರಿದ ಅಂಬೆ ಜ್ಯುವೆಲರ್ಸ್ ಅಂಗಡಿಯಿದ್ದು, ನಿನ್ನೆ ಬೆಳಗ್ಗೆಯಿಂದ ರಾತ್ರಿ 10 ಗಂಟೆವರೆಗೂ ವ್ಯಾಪಾರ-ವಹಿವಾಟು ನಡೆಸಿದ್ದಾರೆ.
ಇನ್ನೇನು ಬಾಗಿಲು ಹಾಕುವ ವೇಳೆ ಪಲ್ಸರ್ ಬೈಕ್‍ನಲ್ಲಿ ಬಂದ ಐದು ದರೋಡೆಕೋರರು ಅಂಗಡಿ ಮುಂದೆ ಬೈಕ್ ನಿಲ್ಲಿಸಿ ಹೆಲ್ಮೆಟ್ ಧರಿಸಿಕೊಂಡೇ ಅಂಗಡಿಯೊಳಗೆ ನುಗ್ಗಿ ಕೈಯಲ್ಲಿ ಹಿಡಿದುಕೊಂಡಿದ್ದ ಬ್ಯಾಗ್‍ನಿಂದ ಮಚ್ಚು, ಲಾಂಗ್‍ಗಳನ್ನು ಹೊರತೆಗೆದು ನೌಕರರನ್ನು ಬೆದರಿಸಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿ ಆಭರಣಗಳನ್ನೆಲ್ಲ ಬ್ಯಾಗ್‍ಗೆ ತುಂಬಿಕೊಂಡಿದ್ದಾರೆ.
ನೌಕರರು ಪ್ರತಿರೋಧ ಒಡ್ಡಲು ಮುಂದಾದಾಗ ಅವರ ಬಳಿ ಮಚ್ಚು ಇರಿಸಿ ಬೆದರಿಸಿದ್ದಾರೆ. ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲ ತುಂಬಿಕೊಂಡು ಪರಾರಿಯಾಗುವ ವೇಳೆ ಒಬ್ಬಾತ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಈತನನ್ನು ಮಾದನಾಯಕನಹಳ್ಳಿ ಪೆÇಲೀಸರಿಗೆ ಒಪ್ಪಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಮಾದನಾಯಕನಹಳ್ಳಿ ಠಾಣೆ ಪೆÇಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.
ದರೋಡೆಕೋರರಿಂದ ಹಲ್ಲೆಗೊಳಗಾದ ಅಂಗಡಿ ಮಾಲೀಕ ಚಂದುರಾಮ್ ಅವರನ್ನು ಸುಂಕದಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ