ಜಯಲಲಿತಾ ಸ್ಮಾರಕ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಪೇದೆ ಸ್ಥಳದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಚೆನ್ನೈ:ಮಾ-4: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸ್ಮಾರಕಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್‌ ಪೇದೆಯೊಬ್ಬರು ಸ್ಮಾರಕ ಸ್ಥಳದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಪೊಲೀಸ್ ಪೇದೆ ಮಧುರೈ ಮೂಲದ ಅರುಲ್‌ ರಾಜ್‌ ಎಂದ್ಫ಼ು ತಿಳಿದುಬಂದಿದೆ. ಮೃತ ಅರುಲ್‌ ಗ್ರೇಟರ್‌ ಚೆನ್ನೈ ಸಿಟಿ ಪೊಲೀಸ್‌ನ ಶಸ್ತ್ರಾಸ್ತ್ರ ಪಡೆಯ ಪೇದೆಯಾಗಿದ್ದರು. ನಗರದ ಮರೀನಾ ಬೀಚ್‌‌ನಲ್ಲಿರುವ ಜಯಲಲಿತಾ ಸ್ಮಾರಕದ ಭದ್ರತೆಗೆ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಪೈಕಿ ಅರುಲ್‌ ಕೂಡ ಒಬ್ಬರಾಗಿದ್ದರು.

ಇಂದು ಮುಂಜಾನೆ ಸ್ಮಾರಕದಲ್ಲಿ ಕರ್ತವ್ಯಕ್ಕೆ ಬಂದಿದ್ದ ಅರುಲ್‌ ಏಕಾಏಕಿ ತನ್ನ ‘303’ ಸರ್ವೀಸ್‌ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಇದರಿಂದ ಸ್ಥಳದಲ್ಲೇ ಅವರು ಕುಸಿದು ಬಿದ್ದಿದ್ದು, ತಕ್ಷಣವೇ ನಗರದ ರಾಜೀವ್‌ ಗಾಂಧಿ ಸರ್ಕಾರಿ ಜನರಲ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಅಷ್ಟರಲ್ಲೇ ಅರುಲ್‌ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಜಯಾ ಸ್ಮಾರಕದಲ್ಲಿ ಭದ್ರತೆಗೆ ನಿಯೋಜಿಸಿದ್ದ ಪೆದೆಯೇ ಏಕಾಏಕಿ ಆತ್ಮಹತ್ಯೆಗೆ ಶರಣಾಗಿರುವ ಈಓ ಘಟನೆ ತಮಿಳುನಾಡಿನಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದರೆ, ಪೇದೆ ಅರುಲ್‌ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುವುದರ ಬಗ್ಗೆ ತಿಳಿದುಬಂದಿಲ್ಲ.

ಅರುಲ್‌ ಆತ್ಮಹತ್ಯೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ನಗರ ಪೊಲೀಸ್‌ ಆಯುಕ್ತ ಎ.ಕೆ. ವಿಶ್ವನಾಥನ್‌‌ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Police shot himself,jayalalitha memorial

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ