ಬಾರದ ಲೋಕಕ್ಕೆ ಅತಿಲೋಕ ಸುಂದರಿ

ಮುಂಬೈ, ಫೆ.25- ಹಿರಿತೆರೆಯಲ್ಲಿ ತಮ್ಮ ನಟನೆಯ ಮಿಂಚು ಹರಿಸಿದ್ದ ಮೋಹಕ ಸುಂದರಿ, ರೂಪ್‍ಕಿ ರಾಣಿ ಶ್ರೀದೇವಿ ಕಿರುತೆರೆಯಲ್ಲೂ ವಿಶಿಷ್ಟ ಛಾಪು ಮೂಡಿಸಿದರು.

ಹಿರಿತೆರೆಯಿಂದ ಕೆಲ ವರ್ಷಗಳ ಕಾಲ ದೂರ ಉಳಿದಿದ್ದ ಶ್ರೀದೇವಿ ಮತ್ತೆ ಬಣ್ಣ ಹಚ್ಚಿದ್ದು ಕಿರುತೆರೆಯಿಂದಲೇ. 2004ರಲ್ಲಿ ಸಹರಾ ಸಿಟ್‍ಕಾಮ್ ಮಾಲಿನಿ, ಜೀನಾ ಇಸಾ ಕಾ ನಾಮ್ ಹೈ ಧಾರಾವಾಹಿಗಳಲ್ಲಿ ತಮ್ಮ ನಟನೆಯಿಂದ ಕಿರುತೆರೆಯಲ್ಲೂ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಗಿಂಡಿದ್ದ ಶ್ರೀದೇವಿ, ಕೆಲವು ಟೀವಿ ರಿಯಾಲ್ಟಿ ಷೋಗಳ ತೀರ್ಪುಗಾರರಾಗಿಯೂ ಗಮನ ಸೆಳೆದಿದ್ದರು.

2005ರಲ್ಲಿ ಪ್ರಸಾರಗೊಗಿಂಡ ಸಂಗೀತದ ರಿಯಾಲ್ಟಿ ಷೋ ಆದ ಕಾಬೂಮ್, 2009ರಲ್ಲಿ ಸೋನಿ ಚಾನಲ್ ಹಮ್ಮಿಕೊಂಡಿದ್ದ ದಸ್ ಕ ದಮ್‍ಗೂ ತೀರ್ಪುಗಾರರಾಗಿದ್ದರು.

2007ರಲ್ಲಿ ನಡೆದ 52ನೆ ಫಿಲ ಫೇರ್ ಪ್ರಶಸ್ತಿಯ ಆಯ್ಕೆ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದ ಶ್ರೀದೇವಿ, ತಮ್ಮ ಚಿತ್ರಗಳಿಗೆ ಮಾತ್ರವಲ್ಲದೆ ಹಲವು ಉದಯೋನ್ಮುಖ ನಟ, ನಟಿಯರ ಚಿತ್ರಗಳಿಗೆ ಪ್ರಚಾರವನ್ನು ಮಾಡುವ ಮೂಲಕ ಗಮನ ಸಳೆದಿದ್ದರು.

ಶ್ರೀದೇವಿಗೆ ಸಮಾಜ ಹಾಗೂ ಮಹಿಳೆಯರ ಸುರಕ್ಷತೆ ಕುರಿತು ಅಗಾಧ ಕಾಳಜಿ ಇತ್ತು. ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಟ್ ಅಮೀರ್‍ಖಾನ್ ನಡೆಸಿಕೊಡುತ್ತಿದ್ದ ಸತ್ಯಮೇವ ಜಯತೇ ಕಾರ್ಯಕ್ರಮದಲ್ಲಿ ಆಕೆ ಮಹಿಳೆಯರ ಮೇಲೆ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪ್ರತಿಕ್ರಿಯಿಸಿದ ರೀತಿಗೆ ಅಂದಿನ ಕೇಂದ್ರ ಸರ್ಕಾರದಿಂದಲೂ ಉತ್ತಮ ಪ್ರತಿಕ್ರಿಯೆಗಳು ಲಭಿಸಿದ್ದವು.

ಕಲಾವಿದೆಯಾಗಿ ಮಾತ್ರವಲ್ಲದೆ ಶ್ರೀದೇವಿ ಉತ್ತಮ ಚಿತ್ರ ಕಲಾವಿದೆಯಾಗಿಯೂ ಮಿಂಚು ಹರಿಸಿದ್ದರು. ಅವರು ಮಾರ್ಚ್ 2010ರಂದು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪೇಟಿಂಗ್ ಸ್ಪರ್ಧೆಯಲ್ಲಿ ಹೌಸ್ ವಿತ್ ದಿ ಮನಿ ಎಂಬ ಕಾನ್ಸೆಪ್ಟ್‍ನ ಚಿತ್ರಕ್ಕಾಗಿ ಬಂದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಕೊಡುಗೆಯಾಗಿ ನೀಡಿದ್ದಳು.

ಶ್ರೀದೇವಿ ಎಂದಾಕ್ಷಣ ಆಕೆಯ ಮುಗ್ಧ ಅಭಿನಯದೊಂದಿಗೆ ಆಕೆಯೊಂದಿಗೆ ನಟಿಸಿದ್ದ ನಟರುಗಳು ಕೂಡ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ.
ಇಲ್ಲೂ ಕೂಡ ಶ್ರೀದೇವಿ ತಮ್ಮದೇ ವೈಶಿಷ್ಟ್ಯತೆಯನ್ನು ಹೊಂದಿದ್ದಾರೆ. ತೆಲುಗು ಚಿತ್ರರಂಗದ ಅತಿರಥ ನಾಯಕ ಎನ್.ಟಿ.ರಾಮರಾವ್‍ರೊಂದಿಗೆ 1972ರಲ್ಲಿ ಬದಿ ಪಂತಲು ಚಿತ್ರದಲ್ಲಿ ಎನ್‍ಟಿಆರ್‍ರ ಮೊಮ್ಮಗಳ ಪಾತ್ರದಲ್ಲಿ ನಟಿಸಿದ್ದ ಶ್ರೀದೇವಿ ನಂತರ ಎನ್‍ಟಿಆರ್‍ರೊಂದಿಗೆ ಅನೇಕ ಚಿತ್ರಗಳಲ್ಲಿ ಹೀರೋಯಿನ್ ಆಗಿ ನಟಿಸಿ ಮಿಂಚಿದ್ದರು.

1979ರಲ್ಲಿ ವೇಟಗಾಡು ಚಿತ್ರದಲ್ಲಿ ಎನ್‍ಟಿಆರ್‍ಗೆ ನಾಯಕಿಯಾಗಿ ನಟನೆ ಆರಂಭಿಸಿದ ಶ್ರೀದೇವಿ ನಂತರ ಅನುರಾಗ ದೇವತಾ, ಬೊಬ್ಬಲಿ ಪುಲಿ, ಜಸ್ಟೀಸ್ ಚೌದರಿ, ವಯ್ಯಾರಿ ಬಮಾಲು ವಂಗಾಲಾಮಾರಿ ಬರ್ತುಲು, ಅಗ್ನಿ ರವ್ವಾ, ಗಜದೊಂಗ, ಕೊಂಡವಿಡಿ ಸಿಂಹಂ, ಸತ್ಯಂ ಶಿವಂ, ರೌಡಿ ರಾಮುಡು ಕೊಂಟಿ ಕೃಷ್ಣುಡು, ವೇಟಗಾಡು, ಸಿಂಹಂ ನವ್ವಿನಿದಿ ಚಿತ್ರಗಳಲ್ಲಿ ರಾಮರಾವ್‍ರ ಸಂಗಾತಿಯಾಗಿ ಮಿಂಚಿದ್ದು ಬಹುತೇಕ ಚಿತ್ರಗಳು ತೆಲುಗು ಚಿತ್ರರಂಗದಲ್ಲಿ ದಾಖಲೆಯನ್ನು ನಿರ್ಮಿಸಿದೆ.
ತನ್ನ 13ನೆ ವಯಸ್ಸಿನಲ್ಲೇ ಸೂಪರ್‍ಸ್ಟಾರ್ ರಜನಿಕಾಂತ್‍ರ ತಾಯಿಯಾಗಿ ಮೂಂಡ್ರು ಮುಡಿಚು ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ನಟಸಿ ಮಿಂಚಿದ್ದ ಶ್ರೀದೇವಿ ನಂತರ ಹೀರೋಯಿನ್ ಆಗಿಯೂ ರಜನಿಯೊಂದಿಗೆ ಜೋಡಿಯಾಗಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು.

ಪೈಪೆÇೀಟಿಗೆ ಬಿದ್ದಂತೆ ನಟಿಸುತ್ತಿದ್ದ ಶ್ರೀದೇವಿ ಮೊದಲ ಬಾರಿಗೆ ರಜನಿಯೊಂದಿಗೆ ನಟಿಸಿದ ತಮಿಳು ಚಿತ್ರ ವಾದಹಿನ್‍ಇಲೈ. ನಂತರ ಟಾಲಿವುಡ್, ಬಾಲಿವುಡ್‍ನಲ್ಲೂ ಈ ಜೋಡಿ ಸಾಕಷ್ಟು ಮೋಡಿ ಮಾಡಿತ್ತು.

ರಜನಿ ಹಾಗೂ ಶ್ರೀದೇವಿ ಪ್ರಿಯಾ, ಧರ್ಮಾತ್ಮ , ರಾಮ್ ರಹೀಮ್ ರಾಬರ್ಟ್, ಜಾನಿ, ರನುವಾ ವೀರಾನ್, ಪೆÇೀಕರಿ ರಾಜಾ, ಜುಲ್ಮ್ ಕೀ ಜಂಜೀರ್, ಅಜ್ ಕ ದಾದಾ, ಭಗವಾನ್ ದಾದಾ, ಗೈರ್ ಕಾನೂನಿ, ಚಾಲ್‍ಬಾಜ್, ಫರೀಸ್ತೆ, ಚೋರ್ ಕಿ ಗರ್ ಚೋರ್‍ನಿ ಸೇರಿದಂತೆ 22ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದರು.

ಬಾಲಿವುಡ್‍ನ ಸ್ನಿಗ್ಧ ಸುಂದರಿ ಶ್ರೀದೇವಿಗೆ ಬೆಂಗಳೂರು ಅಂದರೆ ತುಂಬಾ ಪ್ರೀತಿಯಿತ್ತು. ಹಲವು ಸಂದರ್ಶನಗಳಲ್ಲಿ ಅವರು ಅನೇಕ ಬಾರಿ ಸಿಲಿಕಾನ್ ಸಿಟಿ ಯ ಸ್ಮರಣೆ ಮಾಡಿದ್ದಾರೆ.

ನನಗೆ ಕನ್ನಡ ಚಿತ್ರರಂಗ ಹಾಗೂ ಭಾಷೆ ಅಂದರೆ ಎಲ್ಲಿಲ್ಲದ ಪ್ರೀತಿ, ನಾನು ಇಲ್ಲಿನ ಸ್ಟಾರ್ ನಟರಾದ ಡಾ.ರಾಜ್‍ಕುಮಾರ್‍ರೊಂದಿಗೆ ಭಕ್ತ ಕುಂಬಾರದಲ್ಲಿ ಮುಕ್ತಬಾಯಿ ಎಂಬ ಪಾತ್ರದಲ್ಲಿ ನಟಿಸಿರುವುದು ಇಂದಿಗೂ ನನಗೆ ಖುಷಿ ತಂದಿದೆ ಎಂದು ಹೇಳಿದ್ದರು.

ನಾನು ನಟಿಸಿರುವ ಜಗದೇಕವೀರುಡು ಅತಿಲೋಕ ಸುಂದರಿ ಸೇರಿದಂತೆ ಅನೇಕ ಚಿತ್ರಗಳ ಚಿತ್ರೀಕರಣವು ಕೂಡ ಬೆಂಗಳೂರಿನಲ್ಲೇ ನಡೆದಿದೆ. ನಾನು ಇಲ್ಲಿಗೆ ಬಂದಾಗ ನಾನು ಬೆಂಗಳೂರಿನಲ್ಲಿ ಕಳೆದ ಸುಂದರ ಕ್ಷಣಗಳು ನೆನಪಿಗೆ ಬರುತ್ತದೆ ಎಂದು ಬಣ್ಣಿಸಿದ್ದರು.

1992ರಲ್ಲಿ ಶ್ರೀದೇವಿ ಹಾಗೂ ಅನಿಲ್‍ಕಪೂರ್ ನಟಿಸಿದ್ದ ಜುದಾಯಿ ಚಿತ್ರದ ಚಿತ್ರೀಕರಣವು ಅಭಿಮಾನ್ ಸ್ಟುಡಿಯೋದಲ್ಲಿ ನಡೆದಿತ್ತು ಮತ್ತು ಬಾಲುಮಹೇಂದ್ರ ನಿರ್ದೇಶಿಸಿದ್ದ ಬಾಲಿವುಡ್‍ನ ಸದ್ಮಾ ಹಾಗೂ ತಮಿಳಿನ ಮೂಂಡ್ರಾ ಪಿರೈ ಚಿತ್ರಗಳ ಚಿತ್ರೀಕರಣವು ಬೆಂಗಳೂರಿನಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆಸಿದ್ದು ನನಗೆ ತುಂಬಾ ಸಂತಸ ತಂದಿತ್ತು ಎಂದು ಹೇಳಿಕೊಂಡಿದ್ದರು.

ನನ್ನ 4 ದಶಕಗಳ ಚಿತ್ರ ಜೀವನದಲ್ಲಿ ತೆಲುಗು, ತಮಿಳು, ಹಿಂದಿ, ಮಲಯಾಳಂಗಳಲ್ಲಿ ಅತಿ ಹೆಚ್ಚು ಚಿತ್ರಗಳಲ್ಲೂ ನಟಿಸಿದ್ದರೂ ಕೂಡ ಕನ್ನಡದಲ್ಲಿ ಹೆಚ್ಚು ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಶ್ರೀದೇವಿಯವರು ಕನ್ನಡದ ಭಕ್ತ ಕುಂಬಾರ (1974), ಬಾಲ ಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ (1974), ಹೆಣ್ಣು ಸಂಸಾರದ ಕಣ್ಣು (1975), ಪ್ರಿಯಾ ಪ್ರಿಯಾ (1979) ಎಂಬ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ಸಿಸಿಎಲ್‍ನಲ್ಲೂ ಮಿಂಚು:
ಶ್ರೀದೇವಿಗೆ ನಟನೆ ಮಾತ್ರವಲ್ಲದೆ ಕ್ರೀಡೆಯತ್ತಲೂ ಹೆಚ್ಚು ಆಸಕ್ತಿ ಇತ್ತು. 2014ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಲ್ಲಿ ನಡೆದ ಸಿಸಿಎಲ್ ಪಂದ್ಯದಲ್ಲಿ ಬಂಗಾಳ್ ಟೈಗರ್ಸ್ ತಂಡವನ್ನು ಬೆಂಬಲಿಸಿದ್ದರಲ್ಲದೆ, ಅದೇ ದಿನ ನಡೆದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳ ನಡುವಿನ ಸಂಪೂರ್ಣ ಪಂದ್ಯವನ್ನು ವೀಕ್ಷಿಸುವ ಮೂಲಕ ಬೆಂಗಳೂರಿನಲ್ಲಿರುವ ತನ್ನ ಅಭಿಮಾನಿಗಳ ಮನವನ್ನು ರಂಜಿಸಿದ್ದರು.

ಈಡೇರದ ರವಿ ಕನಸು:
ಜೂಹಿಚಾವ್ಲಾ, ಖುಷ್ಬೂ ಸೇರಿದಂತೆ ಬಾಲಿವುಡ್‍ನ ಬಲು ಬೇಡಿಕೆಯ ನಟಿಯರೆಲ್ಲಾ ಬೆಳಕಿಗೆ ಬಂದಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರಗಳಿಂದಲೇ, , ಶಿಲ್ಪಾಶೆಟ್ಟಿ , ನಗ್ಮಾ ಕೂಡ ರವಿಯ ಸಿನಿಮಾಗಳಲ್ಲಿ ಮಿಂಚಿದ್ದರು. ಆದರೆ ರವಿಚಂದ್ರನ್‍ಗೆ ಶ್ರೀದೇವಿಯವರನ್ನು ತಮ್ಮ ಒಂದು ಚಿತ್ರದಲ್ಲಿ ಒಂದು ಪಾತ್ರ ಮಾಡಿಸಬೇಕೆಂಬ ಕನಸನ್ನು ಹೊತ್ತಿದ್ದರು. ಆದರೆ ಆ ಕನಸು ನನಸಾಗಿಯೇ ಉಳಿಯಿತು.

ಶ್ರೀದೇವಿ ನಂಬರ್ 1 ನಟಿಯಾಗಿ ಮಿಂಚುತ್ತಿದ್ದ ಕಾಲದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪದೇ ಪದೇ ತಮ್ಮ ಚಿತ್ರಗಳಿಗೆ ಶ್ರೀದೇವಿಯವರಿಗೆ ಆಮಂತ್ರಣ ನೀಡುತ್ತಿದ್ದರಾದರೂ ಕೂಡ ಆಕೆಯು ರವಿಯ ಚಿತ್ರದಲ್ಲಿ ನಟಿಸಲು 50 ಲಕ್ಷ ರೂ.ಗಳ ಡಿಮ್ಯಾಂಡ್ ಇಟ್ಟಿದ್ದರು. ಆದರೆ ಅಂದಿನ ಕಾಲದಲ್ಲಿ ರವಿಚಂದ್ರನ್‍ರವರ ಇಡೀ ಚಿತ್ರವೇ ಶ್ರೀದೇವಿ ಕೇಳಿದ್ದ ಸಂಭಾವನೆಯಲ್ಲೇ ಮುಗಿದು ಹೋಗುತ್ತಿದ್ದರಿಂದ ಶ್ರೀದೇವಿಯವರನ್ನು ಸ್ಯಾಂಡಲ್‍ವುಡ್‍ಗೆ ಕರೆತರುವ ಪ್ರಯತ್ನವನ್ನು ರವಿ ಬಿಟ್ಟಿದ್ದರು .

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ