ಕೃಷ್ಣಾ ಹಾಗೂ ತುಂಗಭದ್ರಾ ಜಲಾಶಯಗಳ ಮೇಲ್ಭಾಗದಲ್ಲಿ ನದಿಗಳ ಜೋಡಣೆಗೆ ರೈತರ ಮನವಿ

ಬಳ್ಳಾರಿ:ಫೆ-21:ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ಜಲಾಶಯಗಳ ಮೇಲ್ಭಾಗದಲ್ಲಿ ನದಿಜೋಡಣೆ ಮಾಡಬೇಕು ಹಾಗೂ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಹೂಳನ್ನು ತೆಗೆಯಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ತುಂಗಭದ್ರಾ ರೈತರ ಸಂಘ ಮನವಿ ಮಾಡಿದೆ.

ಬಳ್ಳಾರಿಯ ಮುನ್ಸಿಪಲ್ ಹೈಸ್ಕೂಲು ಮೈದಾನದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ರೈತ ಮುಖಂಡರು, ತುಂಗಭದ್ರಾ ಜಲಾಶಯಕ್ಕೆ ಕಳೆದ 20 ವರ್ಷಗಳಿಂದ ನೀರಿನ ಕೊರತೆ ಉಂಟಾಗಿದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು, ಕರ್ನೂರು, ಕಡಪ, ಅನಂತಪುರ ಮೆಹಬೂಬನಗರ ಈ ಪ್ರದೇಶಗಳ ಏಳು ಜಿಲ್ಲೆಗಳ 12.68 ಲಕ್ಷ ಎಕರೆ ಜಮೀನಿನ ರೈತರ ಬೆಳೆಗಳು ನಾಶವಾಗಿವೆ. ಬೆಳೆದ ಬೆಳೆ ಕೈಸಿಗದೇ ರೈತರು ಸಾಲಗಾರರಾಗಿ ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದಾರೆ.

ಜಲಾಶಯದ ಮೇಲೆ ಸಿಂಗಟಾಲೂರು, ತುಂಗಾ ಮೇಲ್ಡಂಡೆ ಹಾಗೂ ಭದ್ರಾ ಮೇಲ್ದಂದೆ ಯೋಜನೆಗಳು ಪ್ರಗತಿಯಲ್ಲಿವೆ. ಇವುಗಳಿಂದಾಗಿ ಇನ್ಮುಂದೆ ಇನ್ನಷ್ಟು ನೀರಿನ ತೊಂದರೆಗಳು ಎದುರಾಗಲಿವೆ. ಈ ನಿಟ್ಟಿನಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ಜಲಾಶಯಗಳ ಮೇಲ್ಭಾಗದಲ್ಲಿ ನದಿಜೋಡಣೆ ಮಾಡಬೇಕು ಹಾಗೂ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಹೂಳನ್ನು ತೆಗೆಯಬೇಕು ಎಂದು ರೈತರು ಮನವಿ ಮಾಡಿದ್ದಾರೆ.

Tungabhadra Farmers Association,requested, Union Minister Nitin Gadkari

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ