ಹಾಡಹಗಲೇ ಪೆಟ್ರೋಲ್ ಬಂಕ್ ಮ್ಯಾನೇಜರ್‍ರೊಬ್ಬರನ್ನು ಅಡ್ಡಗಟ್ಟಿ 19.50 ಲಕ್ಷ ರೂ ದರೋಡೆ

ಬೆಂಗಳೂರು, ಫೆ.20- ಹಾಡಹಗಲೇ ಜನಸಂದಣಿ ಇರುವಾಗಲೇ ಪೆಟ್ರೋಲ್ ಬಂಕ್ ಮ್ಯಾನೇಜರ್‍ರೊಬ್ಬರನ್ನು ಅಡ್ಡಗಟ್ಟಿದ ದರೋಡೆಕೋರರು ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ 19.50 ಲಕ್ಷ ರೂ. ಹಣವಿದ್ದ ಬ್ಯಾಗನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ರಾಜರಾಜೇಶ್ವರಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು-ಮೈಸೂರು ರಸ್ತೆಯ ರಾಜರಾಜೇಶ್ವರಿನಗರ ಗೇಟ್ ಸಮೀಪದಲ್ಲಿ ಭಾರತ್ ಪೆಟ್ರೋಲಿಯಂ ಬಂಕ್ ಇದೆ. ಭಾನುವಾರ ಸಂಗ್ರಹವಾಗಿದ್ದ 19.50 ಲಕ್ಷ ರೂ. ಹಣವನ್ನು ಬ್ಯಾಂಕ್‍ಗೆ ಕಟ್ಟಲು ನಿನ್ನೆ ಬೆಳಗ್ಗೆ 10.15ರಲ್ಲಿ ಬಂಕ್ ಮ್ಯಾನೇಜರ್ ಸ್ವಾಮಿ ಎಂಬುವವರು ತಮ್ಮ ಬೈಕ್‍ನಲ್ಲಿ ಇಟ್ಟುಕೊಂಡು ಹೋಗುತ್ತಿದ್ದರು.

ಬಂಕ್‍ನಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಬೈಕ್‍ನಲ್ಲಿ ಬಂದ ವ್ಯಕ್ತಿಯೊಬ್ಬ ಇವರ ಬೈಕ್ ಅಡ್ಡಗಟ್ಟಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿದ್ದಾನೆ. ಸ್ವಾಮಿ ಅವರು ಕಣ್ಣು ಒರೆಸಿಕೊಳ್ಳುತ್ತಿದ್ದಂತೆ ಹಿಂದಿನಿಂದ ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ದರೋಡೆಕೋರರು ಬೈಕ್‍ನಲ್ಲಿದ್ದ ಹಣದ ಬ್ಯಾಗನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ದಿನದ 24 ಗಂಟೆ ಕಾಲ ಈ ರಸ್ತೆಯಲ್ಲಿ ಜನಸಂದಣಿ ಇದ್ದೇ ಇರುತ್ತದೆ. ಮೈಸೂರು ರಸ್ತೆಯಿಂದ ಆರ್‍ಆರ್ ನಗರಕ್ಕೆ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಹಾಡಹಗಲೇ ಪೆಟ್ರೋಲ್ ಬಂಕ್ ಮ್ಯಾನೇಜರ್‍ರನ್ನು ಅಡ್ಡಗಟ್ಟಿ ಹಣ ದರೋಡೆ ಮಾಡಿಕೊಂಡು ಹೋಗುವಾಗ ಯಾವೊಬ್ಬ ಸಾರ್ವಜನಿಕರೂ ಸಹಾಯಕ್ಕೆ ಬಾರದಿರುವುದು ದುರದೃಷ್ಟಕರ.

ಸಾರ್ವಜನಿಕರು ಪೆಟ್ರೋಲ್ ಬಂಕ್ ಮ್ಯಾನೇಜರ್ ಅವರ ನೆರವಿಗೆ ದಾವಿಸಿ ದರೋಡೆಕೋರರನ್ನು ಬೆನ್ನಟ್ಟಿದ್ದರೆ ಅವರು ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇತ್ತು. ಯಾರೊಬ್ಬರೂ ಸಹಾಯಕ್ಕೆ ಬಾರದಿರುವುದು ದುರದೃಷ್ಟಕರ.

ತಂಡ ರಚನೆ: ಸುದ್ದಿ ತಿಳಿದ ಆರ್‍ಆರ್ ನಗರ ಠಾಣೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ರಚಿಸಲಾಗಿರುವ ಎರಡು ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ