ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದಲ್ಲೆಲ್ಲ ವಿರೋಧ ಪಕ್ಷಕ್ಕೆ ಬಲ ಬರುತ್ತದೆ – ಸಂಸದ ಪ್ರಹ್ಲಾದ ಜೋಶಿ

ಬಾಗಲಕೋಟೆ, ಫೆ.18- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದಲ್ಲೆಲ್ಲ ವಿರೋಧ ಪಕ್ಷಕ್ಕೆ ಬಲ ಬರುತ್ತದೆ. ಅವರು ಬಂದಲ್ಲೆಲ್ಲ ವಿರೋಧ ಪಕ್ಷದವರು ಗೆಲ್ಲುತ್ತಾರೆ. ಅವರು ಬಂದು ಹೋದಷ್ಟು ನಮಗೇ ಅನುಕೂಲ ಎಂದು ಸಂಸದ ಪ್ರಹ್ಲಾದ ಜೋಶಿ ಇಂದಿಲ್ಲಿ ಭವಿಷ್ಯ ನುಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‍ಗಾಂಧಿ ಸಂಚರಿಸಿದ ಎಲ್ಲೆಡೆ ಬಿಜೆಪಿಗೇ ಜಯವಾಗಿದೆ. ಕರ್ನಾಟಕದಲ್ಲೂ ಬಿಜೆಪಿಗೇ ಜಯವಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ರಾಜ್ಯದಲ್ಲಿ ರಾಹುಲ್ ಮೇನಿಯಾನೂ ಇಲ್ಲ, ಹವಾನೂ ಇಲ್ಲ. ಕಾಂಗ್ರೆಸ್‍ನವರು ಸುಮ್ಮನೆ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದರು.

ಶಾಸಕ ಹ್ಯಾರಿಸ್ ಪುತ್ರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‍ನವರಿಗೆ ಇದು ಹೊಸತೇನಲ್ಲ. ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ಅನೇಕ ಕಾಂಗ್ರೆಸ್ಸಿಗರು ಗೂಂಡಾಗಿರಿ ಮಾಡಿದ್ದಾರೆ. ಕಾಂಗ್ರೆಸ್ ಒಂದು ಗೂಂಡಾ ಮತ್ತು ಭ್ರಷ್ಟ ಸರಕಾರ ಎಂದು ಆರೋಪಿಸಿದರು.

ಹ್ಯಾರಿಸ್ ಪುತ್ರನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ ಅವರು, ಮೋದಿ ಟಿ ಬಗ್ಗೆ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಅವರಿಗೆ ತಿರುಗೇಟು ನೀಡಿ ಮೋದಿ ಬಡತನದಲ್ಲಿ ಬೆಳೆದವರು.ಅವರ ಕುಟುಂಬಸ್ಥರು ಇನ್ನು ಬಸ್‍ನಲ್ಲಿ ಓಡಾಡುತ್ತಾರೆ. ರಾಜಕಾರಣದಿಂದ ಅವರನ್ನು ಮೋದಿ ದೂರ ಇಟ್ಟಿದ್ದಾರೆ. ಮೋದಿ ರೈಲ್ವೆ ನಿಲ್ದಾಣದಲ್ಲಿ ಟಿ ಮಾರಿದ್ದ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಅಲ್ಲಿನ ಸ್ಥಳೀಯರು ಇದನ್ನು ಕಣ್ಣಾರೆ ಕಂಡಿದ್ದಾರೆ. ಟಿ ಮಾರುತ್ತಿದ್ದ ರೈಲ್ವೆ ನಿಲ್ದಾಣ ನವೀಕರಣಗೊಂಡಿದೆ ಎಂದರು.

ಯತ್ನಾಳರ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಇದು ಮಾಧ್ಯಮದಲ್ಲಿ ಮಾತ್ರ ಬಂದಿದೆ. ಈ ವಿಚಾರ ಕೋರ್ ಕಮಿಟಿ ಮುಂದೆ ಬಂದಿಲ್ಲ. ಬಂದ ಮೇಲೆ ಈ ಬಗ್ಗೆ ವಿಚಾರಿಸಲಾಗುವುದು ಎಂದು ತಿಳಿಸಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ