ಬೆಂಗಳೂರಿನಲ್ಲಿ 2 ವಾರ್ಡ್ ಕ್ಲ್ಯಾಂಪ್‍ಡೌನ್ ರಾಜ್ಯದಲ್ಲಿ 207 ಸೋಂಕಿತರು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ. ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಎರಡು ವಾರ್ಡ್‍ಗಳನ್ನು ಕ್ಲ್ಯಾಂಪ್‍ಡೌನ್ ಮಾಡಲಾಗಿದ್ದು, ರಾಜ್ಯಾದ್ಯಂತ ಲಾಕ್‍ಡೌನ್ ವಿಸ್ತರಿಸುವ ವಿಚಾರ ಶನಿವಾರ ಅಂತಿಮವಾಗಲಿದೆ.

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಎರಡು ವಾರ್ಡ್‍ಗಳನ್ನು ಕ್ಲ್ಯಾಂಪ್ ಡೌನ್ ಮಾಡಲಾಗಿದೆ.

ಪಾದರಾಯನಪುರ ಹಾಗೂ ಬಾಪುಜಿನಗರ ವಾರ್ಡ್‍ಗಳು ಹೊರತುಪಡಿಸಿದರೆ ಬೆಂಗಳೂರಿನಲ್ಲಿ ಎಲ್ಲಿಯೂ ಕ್ಲ್ಯಾಂಪ್‍ಡೌನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಬೆಂಗಳೂರು ಜನತೆ ಆತಂಕಪಡುವ ಅಗತ್ಯವಿಲ್ಲ.

ಈ ಎರಡು ವಾರ್ಡ್‍ಗಳಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಇಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಹರಡದಂತೆ ಕ್ಲ್ಯಾಂಪ್‍ಡೌನ್ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ವಾರ್ಡ್‍ಗಳಲ್ಲಿ ಸುಮಾರು 40 ಸಾವಿರ ಜನರಿದ್ದು, ಅಗತ್ಯ ಸೇವೆಗಳನ್ನು ಪೂರೈಸಲು ಬಿಬಿಎಂಪಿ ಸೂಕ್ತ ಕ್ರಮ ಕೈಗೊಂಡಿದೆ. ಮನೆ ಬಾಗಿಲಿಗೆ ದಿನಸಿ ಪದಾರ್ಥಗಳನ್ನು ಬರಲಿದೆ.

ರಾಜ್ಯದಲ್ಲಿ 5665 ಹಾಸಿಗೆಗಳು, 801 ಐಸಿಯು, 372 ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರುಗಳ ಹೋಂ ಕ್ವಾರಂಟೈನ್ ಅವ ಪೂರ್ಣಗೊಂಡಿದ್ದು, ನಿಗದಿತ ಆಸ್ಪತ್ರೆಗಳಲ್ಲಿ 132 ಶಂಕಿತ ವ್ಯಕ್ತಿಗಳನ್ನು ಪ್ರತ್ಯೇಕ ವಾಗಿರಿಸಲಾಗಿದೆ. ಶುಕ್ರವಾರ 61 ಜನರನ್ನ ಹೋಂ ಕ್ವಾರಂಟೈನ್‍ನಿಂದ ಬಿಡುಗಡೆ ಮಾಡಲಾಗಿದೆ.

ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆ. ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಲಾಕ್‍ಡೌನ್ ಪಾಲಿಸಿ ಎಂದಿರುವ ಸಿಎಂ, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಲಾಕ್‍ಡೌನ್ ವಿಸ್ತರಿಸುವ ಬಗ್ಗೆ ಒಲವು ವ್ಯಕ್ತವಾಗಿದೆ.

ಪ್ರಧಾನಿಯೊಂದಿಗಿನ ವೀಡಿಯೋ ಸಂವಾದದ ನಂತರ ರಾಜ್ಯದಲ್ಲಿ ಲಾಕ್‍ಡೌನ್ ಸ್ಥಿತಿಗತಿ ಇಲ್ಲವೇ ಸೀಲ್ ಡೌನ್ ವಿಚಾರ ಅಂತಿಮವಾಗಲಿದೆ.

ರಾಜ್ಯದಲ್ಲಿ 207 ಪ್ರಕರಣ ಪತ್ತೆ
ಬೆಂಗಳೂರು – 71ಪ್ರಕರಣ
ಮೈಸೂರು – 42 ಪ್ರಕರಣ
ದಕ್ಷಿಣ ಕನ್ನಡ – 12 ಪ್ರಕರಣ
ಬೆಳಗಾವಿ – 10 ಪ್ರಕರಣ
ಉತ್ತರ ಕನ್ನಡ – 9 ಪ್ರಕರಣ
ಚಿಕ್ಕಬಳ್ಳಾಪುರ – 9 ಪ್ರಕರಣ
ಕಲಬುರಗಿ – 10 ಪ್ರಕರಣ
ಬೆಂಗಳೂರು ಗ್ರಾಮಾಂತರ – 04 ಪ್ರಕರಣ
ಬೀದರ್ – 10 ಪ್ರಕರಣ
ದಾವಣಗೆರೆ – 3 ಪ್ರಕರಣ
ಉಡುಪಿ – 3 ಪ್ರಕರಣ
ಬಳ್ಳಾರಿ – 6 ಪ್ರಕರಣ
ಕೊಡಗು – 1 ಪ್ರಕರಣ
ಧಾರವಾಡ – 2 ಪ್ರಕರಣ
ತುಮಕೂರು – 1 ಪ್ರಕರಣ
ಬಾಗಲಕೋಟೆ – 8 ಪ್ರಕರಣ
ಮಂಡ್ಯ – 5 ಪ್ರಕರಣ
ಗದಗ – 1 ಪ್ರಕರಣ ಪತ್ತೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ