ಶಿವಸೇನಾ ನಾಯಕರೊಬ್ಬರ ಹತ್ಯೆಗೆ ವಿಫಲಯತ್ನ

ಮುಂಬೈ, ಡಿ.19- ಮುಂಬೈನ ಉಪನಗರಿ ವಿಖ್ರೋಲಿಯಲ್ಲಿ ಇಂದು ಬೆಳಗ್ಗೆ ಶಿವಸೇನಾ ನಾಯಕರೊಬ್ಬರ ಹತ್ಯೆಗೆ ವಿಫಲಯತ್ನ ನಡೆದಿದೆ. ಗುಂಡೇಟಿನಿಂದ ಗಾಯಗೊಂಡಿರುವ ಚಂದ್ರಶೇಖರ್ ಜಾಧವ್(55) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಧವ್ ಹತ್ಯೆಗೆ ಯತ್ನಿಸಿದ ಅಭಯ್ ವಿಕ್ರಮ್ ಸಿಂಗ್(22) ಎಂಬಾತನನ್ನು ಪೋಲೀಸರು ಬಂಧಿಸಿದ್ದು, ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ.

ವಿಖ್ರೋಲಿಯ ಠಾಕೂರ್ ನಗರದ ಸಾಯಿ ಮಂದಿರದ ಆವರಣದಲ್ಲಿ ಇಂದು ಬೆಳಗ್ಗೆ 7.15ರಲ್ಲಿ ಈ ಘಟನೆ ನಡೆದಿದೆ. ಜಾಧವ್ ಮಂದಿರ ಬಳಿ ಕುಳಿತಿದ್ದಾಗ ವಿಕ್ರಮ್ ಸಿಂಗ್ ತನ್ನ ಗನ್‍ನಿಂದ ಐದು ಸುತ್ತು ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ. ಅಲ್ಲೇ ಇದ್ದ ಜಾಧವ್ ಪುತ್ರ ಮತ್ತು ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಪೋಲೀಸರಿಗೆ ಒಪ್ಪಿಸಿದರು.

ಗಾಯಗೊಂಡ ಚಂದ್ರಶೇಖರ್ ಜಾಧವ್‍ರನ್ನು ವಿಖ್ರೋಲಿಯ ಗೋದ್ರೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತ ಸಿಂಗ್ ಉತ್ತರಪ್ರದೇಶದ ಅಲಹಬಾದ್‍ನವನಾಗಿದ್ದು, ಥಳಿತದಿಂದ ಗಾಯಗೊಂಡು ರಾಜವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನನ್ನು ನಂತರ ಪೋಲೀಸರು ಮತ್ತೆ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ಧಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ