ಪೌರತ್ವ ತಿದ್ದುಪಡಿ ಮಸೂದೆ-ಮಸೂದೆಯನ್ನು ಖಂಡಿಸಿ ಐಪಿಎಸ್ ಅಧಿಕಾರಿ ರಾಜೀನಾಮೆ

ಮುಂಬೈ,ಡಿ.12- ಪೌರತ್ವ (ತಿದ್ದುಪಡಿ) ಮಸೂದೆಯು ಕೋಮುವಾದ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿ ಮಹಾರಾಷ್ಟ್ರ ಕೇಡರ್ ಐಪಿಎಸ್ ಅಧಿಕಾರಿ ತಮ್ಮ ಸೇವೆಗೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಮುಂಬೈನ ವಿಶೇಷ ಐಜಿಪಿಯಾಗಿರುವ ಅಬ್ದುರ್ ರಹಮಾನ್, ಪೌರತ್ವ ತಿದ್ದುಪಡಿ ಮಸೂದೆಯು ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ಮಸೂದೆಯನ್ನು ಖಂಡಿಸಿ ನಾಳೆಯಿಂದ ಕಚೇರಿಗೆ ಗೈರಾಗಲು ನಿರ್ಧರಿಸಿದ್ದು, ತನ್ನ ಸೇವೆಗೆ ರಾಜೀನಾಮೆ ನೀಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಈ ಮಸೂದೆ ಭಾರತದ ಧಾರ್ಮಿಕ ಬಹುತ್ವಕ್ಕೆ ವಿರುದ್ಧವಾಗಿದ್ದು, ಈ ಮಸೂದೆಯನ್ನು ವಿರೋಧಿಸುವಂತೆ ನಾನು ಎಲ್ಲ ನ್ಯಾಯ ಪ್ರಿಯರಿಗೆ ವಿನಂತಿಸುತ್ತೇನೆ. ಇದು ಸಂವಿಧಾನದ ಮೂಲಭೂತ ಲಕ್ಷಣಕ್ಕೆ ವಿರುದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.

ಮಸೂದೆ ಅಂಗೀಕಾರದ ಸಮಯದಲ್ಲಿ, ತಪ್ಪು ಸಂಗತಿಗಳು, ತಪ್ಪುದಾರಿಗೆಳೆಯುವ ಮಾಹಿತಿ ಮತ್ತು ತಪ್ಪು ತರ್ಕವನ್ನು ಗೃಹ ಸಚಿವ ಅಮಿತ್ ಷಾ ರಚಿಸಿದ್ದಾರೆ. ಇತಿಹಾಸವನ್ನು ತಿರುಚಲಾಗುತ್ತಿದೆ. ಮಸೂದೆಯ ಹಿಂದಿನ ಆಲೋಚನೆ ಮುಸ್ಲಿಮರಲ್ಲಿ ಭಯ ಹುಟ್ಟುಹಾಕಿ ರಾಷ್ಟ್ರವನ್ನು ವಿಭಜಿಸುವುದೇ ಆಗಿದೆ ಎಂದು ಅವರು ಹೇಳಿದ್ದಾರೆ.

ಮಸೂದೆ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಮತ್ತು ಅದರ ಮೂಲ ಲಕ್ಷಣಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು. ಇದು ಧರ್ಮದ ಆಧಾರದ ಮೇಲೆ ವ್ಯಕ್ತಿಗಳನ್ನು ತಾರತಮ್ಯ ಮಾಡುತ್ತದೆ. ಇದು ಭಾರತದಲ್ಲಿ 200 ಮಿಲಿಯನ್ ಮುಸ್ಲಿಮರನ್ನು ರಾಕ್ಷಸೀಕರಿಸುವ ಕ್ರಿಯೆಯಾಗಿದೆ ಎಂದು ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ