ಬಹುತೇಕ ಶಾಂತಿಯುತವಾಗಿ ಮತದಾನ

ಬೆಂಗಳೂರು,ನ.12-ರಾಜ್ಯದ ಎರಡು ಮಹಾನಗರ ಪಾಲಿಕೆ, ಆರು ನಗರಸಭೆ, ಮೂರು ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯಿತಿಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿ ಸಂಜೆ 5ಗಂಟೆವರೆಗೂ ನಡೆಯಿತು.

ದಾವಣಗೆರೆ ಮತ್ತು ಮಂಗಳೂರು ಮಹಾನಗರ ಪಾಲಿಕೆ, ಕನಕಪುರ, ಕೋಲಾರ, ಮುಳಬಾಗಿಲು, ಕೆಜಿಎಫ್, ಚಿಂತಾಮಣಿ ನಗರಸಭೆಗಳಿಗೆ, ಮಾಗಡಿ, ಬಿರೂರು, ಕಂಪ್ಲಿ ಪುರಸಭೆಗಳಿಗೆ ಹಾಗೂ ಶಿವಮೊಗ್ಗ ಜಿಲ್ಲೆಯ ಜೋಗ್-ಕಾರ್ಗಲ್, ಕೂಡ್ಲಿಗಿ, ಕುಂದಗೋಳ ಪಟ್ಟಣಪಂಚಾಯ್ತಿಗೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳ 409 ವಾರ್ಡ್‍ಗಳಿಗೆ ಮತದಾನ ನಡೆಯಿತು.

ಕಾಂಗ್ರೆಸ್ 386, ಬಿಜೆಪಿ 363, ಜೆಡಿಎಸ್ 233, ಸಿಪಿಐ 7, ಸಿಪಿಐ(ಎಂ) 12, ಬಿಎಸ್‍ಪಿ 24, ಪಕ್ಷೇತರರು 475 ಅಭ್ಯರ್ಥಿಗಳು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಣದಲ್ಲಿ ಒಟ್ಟು 1087 ಅಭ್ಯರ್ಥಿಗಳಿದ್ದಾರೆ. ಈ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಮತ ಚಲಾಯಿಸುವ ಮೂಲಕ ಇಂದು ನಿರ್ಧಾರ ಮಾಡಿದ್ದಾರೆ.

ಈಗಾಗಲೇ 9 ವಾರ್ಡ್‍ಗಳಿಗೆ ಅವಿರೋಧ ಆಯ್ಕೆಯಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ನಗರ ಸ್ಥಳೀಯ ಸಂಸ್ಥೆಗಳ 1388 ಮತಗಟ್ಟೆಗಳಲ್ಲಿ, 13,04,614 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು.

ನವೆಂಬರ್ 14ರಂದು ಆಯಾ ತಾಲೂಕು ಕೇಂದ್ರ ಸ್ಥಳದಲ್ಲಿ ಮತಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ