ಹಿಂಸಾಚಾರಕ್ಕೆ ಟಿಎಂಸಿ ಕಾರಣ-ಅಮಿತ್ ಶಾ

ನವದೆಹಲಿ, ಮೇ 15-ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಆ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಕಾರಣ ಎಂದು ಆರೋಪಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈ ವಿಷಯದಲ್ಲಿ ಚುನಾವಣಾ ಆಯೋಗ ಮೂಕ ಪ್ರೇಕ್ಷಕ ಎಂದು ಆರೋಪಿಸಿದೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲ್ಕತದಲ್ಲಿ ನಿನ್ನೆ ನಡೆದ ಗಲಭೆ ಮತ್ತು ಹಿಂಸಾಚಾರಕ್ಕೆ ಟಿಎಂಸಿ ಕಾರಣ ಹೊರತು, ಬಿಜೆಪಿಯಲ್ಲ ಎಂದು ತಿಳಿಸಿದರು.

ನಿನ್ನೆ ರೋಡ್ ಶೋ ನಡೆಯುತ್ತಿದ್ದಾಗ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ನನ್ನ ವಾಹನದ ಮೇಲೆ ದಾಳಿ ನಡೆಸಿದರು. ಸಿಆರ್‍ಪಿಎಫ್ ರಕ್ಷಣೆ ಇಲ್ಲದಿದ್ದರೆ ನನಗೆ ಅಪಾಯವಾಗುತ್ತಿತ್ತು. ಸಿಬ್ಬಂದಿ ರಕ್ಷಣೆ ನೀಡಿದ್ದರಿಂದ ನಾನು ಗಾಯಗೊಳ್ಳದೇ ಪಾರಾದೆ ಎಂದು ಅಮಿತ್ ಶಾ ಹೇಳಿದರು.

ಲೋಕಸಭಾ ಚುನಾವಣೆಯ ಎಲ್ಲ ಆರು ಹಂತಗಳಲ್ಲೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ. ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಸ್ಪರ್ಧಿಸುತ್ತಿದೆ. ಬೇರೆ ಯಾವ ರಾಜ್ಯಗಳಲ್ಲೂ ಗಲಭೆ-ಹಿಂಸಾಚಾರ ನಡೆದಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಭಾರೀ ಹಿಂಸಾಚಾರ ನಡೆದಿದೆ. ಟಿಎಂಸಿ ಅಲ್ಲಿ ಸ್ಪರ್ಧಿಸಿರುವುದೇ ಇದಕ್ಕೆ ಕಾರಣ ಎಂದು ಅಮಿತ್ ಶಾ ವಿಶ್ಲೇಷಿಸಿದರು.

ವಿದ್ಯಾಸಾಗರ್ ಕಾಲೇಜಿನ ಒಳಗೆ ಇದ್ದ ಪಶ್ಚಿಮ ಬಂಗಾಳದ ಖ್ಯಾತ ತತ್ತ್ವಜ್ಞಾನಿ ಈಶ್ವರ ಚಂದ್ರ ವಿದ್ಯಾಸಾಗರ್ ಪ್ರತಿಮೆಯನ್ನು ಟಿಎಂಸಿ ಗೂಂಡಾಗಳು ಧ್ವಂಸಗೊಳಿಸಿ. ಅದನ್ನು ನಮ್ಮ ಪಕ್ಷದ ಮೇಲೆ ಹಾಕಿದ್ದಾರೆ. ಸೋಲಿನ ಭೀತಿಯಿಂದ ಅನುಕಂಪದ ಪ್ರಯೋಜನ ಪಡೆಯಲು ಟಿಎಂಸಿ ನಾಯಕಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಈ ಕೃತ್ಯ ಎಸಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಆರೋಪಿಸಿದರು.

ಕೋಲ್ಕತ ಸೇರಿದಂತೆ ಪಶ್ಚಿಮ ಬಂಗಾಳದ ವಿವಿಧೆಡೆ ವ್ಯಾಪಕ ಗಲಭೆ ಮತ್ತು ಹಿಂಸಾಚಾರ ನಡೆಯುತ್ತಿದ್ದರೂ ಚುನಾವಣಾ ಆಯೋಗ ಮೂಕ ಪ್ರೇಕ್ಷಕನಂತಾಗಿದೆ.

ಟಿಎಂಸಿ ಗೂಂಡಾಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಆಯೋಗವು ಇಬ್ಬಗೆ ನೀತಿ ಅನುಸರಿಸುತ್ತಿದೆ. ಟಿಎಂಪಿ ಪರ ಪಕ್ಷಪಾತ ಮಾಡುತ್ತಿದೆ ಎಂದು ಶಾ ಆಪಾದಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ