ಸಿದ್ದರಾಮಯ್ಯ ಆನೆ ಇದ್ದಂತೆ-ಶಾಸಕ ಎಸ್.ಟಿ.ಸೋಮಶೇಖರ್

ಬೆಂಗಳೂರು, ಮೇ 13-ನಾವು ಕೂಡ ಮೈತ್ರಿಯನ್ನು ಹಿಡಿದುಕೊಂಡು ಕುಳಿತಿಲ್ಲ ಎಂದು ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್, ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಪೇಂದ್ರರೆಡ್ಡಿ ಯಾರು? ಮೈತ್ರಿ ಸರ್ಕಾರದ ಬಗ್ಗೆ ಹೇಳಿಕೆ ನೀಡಲು ದೇವೇಗೌಡರು ಕುಪೇಂದ್ರರೆಡ್ಡಿಗೆ ಅಧಿಕೃತವಾದ ಅಧಿಕಾರ ನೀಡಿದ್ದಾರೆಯೇ? ಕುಪೇಂದ್ರ ರೆಡ್ಡಿ ಬೇಕಿದ್ದರೆ ಜೆಡಿಎಸ್ ಕುರಿತು ಅಧಿಕೃತವಾಗಿ ಹೇಳಿಕೆ ನೀಡಲು ಅಧಿಕಾರ ಹೊಂದಿದ್ದಾರೆ ಎಂದು ದೇವೇಗೌಡರಿಂದ ಜಿಪಿಎ ತೆಗೆದುಕೊಂಡು ಬರಲಿ, ನಂತರ ಮಾತನಾಡಲಿ. ಅವರು ಸಂಸದರೇ ಇರಬಹುದು, ಆದರೆ ಬಾಯಿಗೆ ಬಂದಂತೆ ಮಾತನಾಡಬಾರದು. ಆನೆ ನಡೆದುಹೋಗುತ್ತಿರುತ್ತದೆ, ನಾಯಿಗಳು ಬೊಗಳುತ್ತಿರುತ್ತವೆ. ಆದರೆ ಆನೆಗೆ ಏನೂ ಆಗುವುದಿಲ್ಲ. ಸಿದ್ದರಾಮಯ್ಯ ಆನೆ ಇದ್ದಂತೆ ಹೊಗಳಿಕೆಗೆ ಹಿಗ್ಗುವುದೂ ಇಲ್ಲ, ತೆಗಳಿಕೆಗೆ ತಗ್ಗುವುದೂ ಇಲ್ಲ ಎಂದು ಹೇಳಿದ್ದಾರೆ.

ಮೈತ್ರಿ ಸರ್ಕಾರ ಇರಬೇಕೋ, ಬೇಡವೋ ಎಂದು ಹೇಳುವಷ್ಟು ದೊಡ್ಡವನು ನಾನಲ್ಲ. ಸಮ್ಮಿಶ್ರ ಸರ್ಕಾರ ರಾಹುಲ್‍ಗಾಂಧಿ, ದೇವೇಗೌಡರ ಮಟ್ಟದಲ್ಲಿ ಚರ್ಚೆಯಾಗಿ ರಚನೆಯಾಗಿದೆ. ಆ ಬಗ್ಗೆ ಮಾತನಾಡಲು ನನಗಾಗಲೀ, ಕುಪೇಂದ್ರ ರೆಡ್ಡಿಗಾಗಲೀ ಅಧಿಕಾರ ಇಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ