ಪಾಕಿಸ್ತಾನ ಯೋಧರಿಂದ ಮುಂದುವರೆದ ಕದನ ವಿರಾಮ ಉಲ್ಲಂಘನೆ

ಜಮ್ಮು, ಮಾ.22-ಕಾಶ್ಮೀರ ಕಣಿವೆಯ ಗಡಿನಿಯಂತ್ರ ರೇಖೆ (ಎಲ್‍ಓಸಿ)ಬಳಿ ಪಾಕಿಸ್ತಾನ ಯೋಧರು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ಮುಂದುವರೆಸಿದೆ.

ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಪಾಕ್ ರೇಂಜರ್‍ಗಳ ಪುಂಡಾಟಕ್ಕೆ ಭಾರತದ ಕೆಲ ಯೋಧರು ಗಾಯಗೊಂಡಿದ್ದಾರೆ. ಇದಕ್ಕೆ ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರ ನೀಡಿದ್ದು ಕೆಲಕಾಲ ಗುಂಡಿನ ಚಕಮಕಿ ನಡೆಯಿತು.

ಜಮ್ಮು ಪ್ರಾಂತ್ಯದ ಪಲ್ಲನ್‍ವಾಲಾ, ಸುಂದರಬನಿ ಮತ್ತು ನೌಷೇರಾ ವಲಯದಲ್ಲಿನ ಎಲ್‍ಓಸಿ ಬಳಿ ಸೇನೆ ಪಡೆಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ಯೋಧರು ಯುದ್ಧ ವಿರಾಮ ಉಲ್ಲಂಘಿಸಿ ಅಪ್ರೇರೆತ ಗುಂಡಿನ ದಾಳಿ ನಡೆಸಿದರು.

ಈ ಕೃತ್ಯದಲ್ಲಿ ಗಡಿ ಭದ್ರತಾ ಪಡೆಯ ಕೆಲ ಯೋಧರಿಗೆ ಗಾಯಗಳಾಗಿವೆ. ಇದಕ್ಕೆ ನಮ್ಮ ಸೇನಾ ಪಡೆಗಳು ದಿಟ್ಟ ಪ್ರತ್ಯುತ್ತರ ನೀಡಿವೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ಧಾರೆ.

ಈ ವರ್ಷದಲ್ಲಿ ಪಾಕಿಸ್ತಾನ 115ಕ್ಕೂ ಹೆಚ್ಚು ಬಾರಿ ಯುದ್ಧ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದು, ಕೆಲ ಯೋಧರು ಹುತಾತ್ಮರಾಗಿ ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ