ವಾತಾವರಣದಲ್ಲಿ ಬದಲಾವಣೆ ತಾಪಮಾನದಲ್ಲಿ ಏರಿಳಿತ

ಬೆಂಗಳೂರು, ಮಾ.11-ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿಯಿಂದಾಗಿ ಗರಿಷ್ಠ ತಾಪಮಾನದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಕೆಲವೆಡೆ ಅಗುರ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಏರಿಳಿತವಾಗಿದೆ. ಕೊಡಗು, ಮಲೆನಾಡು ಭಾಗದ ಕೆಲವೆಡೆ ಚದುರಿದಂತೆ ಸಾಧಾರಣ ಮಳೆಯಾದ ವರದಿಯಾಗಿದೆ. ನಾಳೆಯಿಂದ ಮತ್ತೆ ಗರಿಷ್ಠ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ ಎಂದು ಹೇಳಿದರು.

ಮೇಲ್ಮೈ ಸುಳಿಗಾಳಿಯಿಂದಾಗಿ ಭಾಗಶಃ ಮೋಡ ಕವಿದ ವಾತಾವರಣ ದಕ್ಷಿಣ ಒಳನಾಡಿನಲ್ಲಿ ಕಂಡುಬಂದಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆಗಳಿವೆ. ಆದರೆ ಭಾರೀ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದಿದ್ದಾರೆ.

ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದಾಗಿ ಕರಾವಳಿಯಲ್ಲಿ ಗರಿಷ್ಠ ತಾಪಮಾನದಲ್ಲಿ ಸ್ವಲ್ಪ ಕಡಿಮೆಯಾಗಿದ್ದರೆ, ಉತ್ತರ ಒಳನಾಡಿನಲ್ಲಿ ಸುಮಾರು 2ಡಿಗ್ರಿಯವರೆಗೂ ತಾಪಮಾನ ಹೆಚ್ಚಾಗಿತ್ತು. ಬಳ್ಳಾರಿ, ಕಲಬುರಗಿಯಲ್ಲಿ ತಾಪಮಾನ ಗರಿಷ್ಠ 40 ಡಿಗ್ರಿ ಸೆಲ್ಷಿಯಸ್‍ಗೆ ತಲುಪಿವೆ.

ದಾವಣಗೆರೆಯಲ್ಲಿ 39 ಡಿಗ್ರಿ ಸೆಲ್ಷಿಯಸ್ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ 37 ಡಿಗ್ರಿ ಸೆಲ್ಷಿಯಸ್‍ವರೆಗೂ ಗರಿಷ್ಠ ತಾಪಮಾನ ದಾಖಲಾಗಿತ್ತು. ಮೋಡ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ 35 ಡಿಗ್ರಿ ಸೆಲ್ಷಿಯಸ್‍ಗಿಂತ ಕಡಿಮೆ ದಾಖಲಾಗಿದೆ. ನಾಳೆಯಿಂದ ಮತ್ತೆ ನಿರಂತರ ತಾಪಮಾನ ಏರಿಕೆಯಾಗುವ ಸರಾಸರಿಗಿಂತ ಒಂದೆರಡು ಡಿಗ್ರಿ ಸೆಲ್ಷಿಯಸ್ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ ಕನಿಷ್ಠ ತಾಪಮಾನದಲ್ಲೂ ಏರಿಕೆ ಕಂಡು ಬಂದಿದ್ದು, 22 ರಿಂದ 23ರಷ್ಟು ಡಿಗ್ರಿ ಸೆಲ್ಷಿಯಸ್‍ನಷ್ಟು ತಾಪಮಾನ ರಾತ್ರಿ ವೇಳೆ ಕಂಡು ಬರುತ್ತಿದೆ ಎಂದು ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ