ದೆಹಲಿಯ ಸಿಜಿಒ ಕಾಂಪ್ಲೆಕ್ಸ್‍ನಲ್ಲಿ ಆಕಸ್ಮಿಕ ಬೆಂಕಿ-ಸುಟ್ಟು ಕರಕಲಾದ ಮಹತ್ವದ ದಾಖಲೆಗಳು

ನವದೆಹಲಿ, ಮಾ.6- ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆಯ ಸಿಜಿಒ ಕಾಂಪ್ಲೆಕ್ಸ್‍ನಲ್ಲಿ ಆಕಸ್ಮಿಕ ಅಗ್ನಿ ಅನಾಹುತ ಉಂಟಾಗಿದ್ದು, ಕೇಂದ್ರ ಸರ್ಕಾರದ ಕೆಲವು ಮಹತ್ವದ ದಾಖಲೆಗಳು ಸುಟ್ಟು ಕರಕಲಾಗಿವೆ.

ನವದೆಹಲಿಯ ಲೋದಿ ರಸ್ತೆಯಲ್ಲಿರುವ ಸಾಮಾಜಿಕ ನ್ಯಾಯ ಇಲಾಖೆಯ ಸಿಜಿಒ ಕಾಂಪ್ಲೆಕ್ಸ್‍ನಲ್ಲಿ ಇದ್ದಕ್ಕಿದ್ದಂತೆ ಅಗ್ನಿ ಅನಾಹುತ ಉಂಟಾಯಿತು. ಪರಿಣಾಮ ಕೇಂದ್ರ ಸರ್ಕಾರಕ್ಕೆ ಸೇರಿದ್ದ ಕೆಲವು ಅಮೂಲ್ಯವಾದ ದಾಖಲೆಗಳು ಸುಟ್ಟು ಬೂದಿಯಾಗಿವೆ ಎಂದು ತಿಳಿದುಬಂದಿದೆ.

ಸಿಜಿಒ ಕಾಂಪ್ಲೆಕ್ಸ್‍ನ 5ನೆ ಮಹಡಿಯ ಪಂಡಿತ್ ದೀನ್‍ದಯಾಳ್ ಅಂತ್ಯೋದಯ ಭವನ್‍ನಲ್ಲಿ ಈ ಘಟನೆ ನಡೆದಿದೆ. ಘಟನಾ ಸುದ್ದಿ ತಿಳಿಯುತ್ತಿದ್ದಂತೆ 25 ಅಗ್ನಿಶಾಮಕ ಪಡೆ ಆಗಮಿಸಿ ಬೆಂಕಿಯನ್ನು ದಹಿಸುವಲ್ಲಿ ಯಶಸ್ವಿಯಾಗಿವೆ.

ಇದ್ದಕ್ಕಿದ್ದಂತೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ನಿವಾಸಿಗಳು ಆತಂಕದಿಂದ ಹೊರಬಂದು ಪೆÇಲೀಸರಿಗೆ ಮಾಹಿತಿ ನೀಡಿದರು.
ಬೆಂಕಿ ನಂದಿಸುವ ವೇಳೆ ಸಿಐಎಸ್‍ಎಫ್‍ನ ಸಬ್‍ಇನ್ಸ್‍ಪೆಕ್ಟರ್ ಒಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣವೇ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕಟ್ಟಡದಲ್ಲಿ ರಕ್ಷಣಾ ಇಲಾಖೆಯ ಭಾರತೀಯ ವಾಯುಪಡೆ, ಜಲಸಂಪನ್ಮೂಲ, ಅರಣ್ಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಕೇಂದ್ರ ಸರ್ಕಾರಕ್ಕೆ ಸೇರಿದ ಕೆಲವು ಮಹತ್ವದ ಇಲಾಖೆಗಳ ದಾಖಲೆಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿತ್ತು.

ಈ ಘಟನೆಯಿಂದಾಗಿ ಸರ್ಕಾರಕ್ಕೆ ಸೇರಿದ ಇತರ ಇಲಾಖೆಯ ಕಡತಗಳು ಸಹ ಸುಟ್ಟುಹೋಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕಟ್ಟಡವನ್ನು ಮೊದಲು ಪರ್ಯಾವರಣ ಭವನ್ ಎಂದು ಕರೆಯಲಾಗುತ್ತಿತ್ತು. 2016ರ ನಂತರ ಇದಕ್ಕೆ ದೀನ್‍ದಯಾಳ್ ಅಂತ್ಯೋದಯ ಭವನ್ ಎಂದು ಮರುನಾಮಕರಣ ಮಾಡಲಾಯಿತು.
ಘಟನೆ ಕುರಿತಂತೆ ಕೇಂದ್ರ ಸರ್ಕಾರ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ಕೊಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ