ರಫೇಲ್ ಹಗರಣದ ಬಗ್ಗೆ ಜೆಪಿಸಿ ತನಿಖೆಯಾಗಬೇಕು: ಕಾಂಗ್ರೇಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಫೆ.12-ಫ್ರಾನ್ಸ್‍ನಿಂದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ವಿವಾದ ಇಂದು ಲೋಕಸಭೆಯಲ್ಲಿ ಮಾರ್ದನಿಸಿತು.

ಈ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ ಪ್ರಸಂಗವು ನಡೆಯಿತು.

ಇದೇ ವಿಷಯದಲ್ಲಿ 20ನಿಮಿಷಗಳ ಕಾಲ ಕಲಾಪ ಮುಂದೂಡಿದ ನಂತರ ಮತ್ತೆ ಸದಸ ಸಮಾವೇಶಗೊಂಡಾಗ ಖರ್ಗೆ ರಫೇಲ್ ಹಗರಣದ ಬಗ್ಗೆ ಜೆಪಿಸಿ ತನಿಖೆ ಆಗಬೇಕೆಂದು ಪಟ್ಟುಹಿಡಿದು ಚರ್ಚೆಗೆ ಒತ್ತಾಯಿಸಿದರು.

ಈ ಬಗ್ಗೆ ಸೂಕ್ತ ಸಮಯದಲ್ಲಿ ನಿಮಗೆ ಚರ್ಚಿಸಲು ಅವಕಾಶ ನೀಡುವುದಾಗಿ ಸ್ಪೀಕರ್ ಸುಮಿತ್ರ ಮಹಾಜನ್ ಭರವಸೆ ನೀಡಿದರೂ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಏನೀದು ? ಜೆಪಿಸಿ ಬಗ್ಗೆ ತನಿಖೆ ಆಗಬೇಕೆಂದು ಏರುದನಿಯಲ್ಲಿ ಪ್ರಶ್ನಿಸಿದರು. ಖರ್ಗೆ ಪಕ್ಕದಲ್ಲಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಂಬಲ ಸೂಚಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಘೋಷಣಾಪತ್ರವನ್ನು ಹಿಡಿದು ಪ್ರತಿಭಟನೆ ನಡೆಸಿದರು.

ನಮಗೆ ಚರ್ಚಿಸಲು ಅವಕಾಶ ನೀಡದಿದ್ದ ಮೇಲೆ ನಾವು ಇಲ್ಲಿ ಇರಬೇಕೆ ಎಂದು ಪ್ರಶ್ನಿಸಿದ ಖರ್ಗೆ ಇಡೀ ಕಾಂಗ್ರೆಸ್ ಸದಸ್ಯರುಗಳ ಜತೆ ಸಭಾತ್ಯಾಗ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ