ಉರಿ ಚಿತ್ರ ವೀಕ್ಷಣೆ ಮಾಡಿದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್

ಪಣಜಿ,ಜ.28- ಕ್ಯಾನ್ಸರ್ ರೋಗದ ಚಿಕಿತ್ಸೆ ಪಡೆಯುವ ಸಲುವಾಗಿ ಸಾರ್ವಜನಿಕರಿಂದ ದೂರ ಉಳಿದಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿನ್ನೆ ಉರಿ ಚಿತ್ರ ವೀಕ್ಷಣೆ ಮಾಡುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿರುವ ಸರ್ಜಿಕಲ್ ಸ್ಟ್ರೈಕ್‍ನ ಎರಡನೇ ಅವತರಿಣಿಕೆಯಂತಿರುವ ಉರಿ ಚಿತ್ರವನ್ನು ತಮ್ಮ ಸಹೋದ್ಯೋಗಿಗಳ ಜೊತೆ ವೀಕ್ಷಣೆ ಮಾಡಿ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಉರಿ ಚಿತ್ರದ ಜೋಷ್ ಹೇಗಿದೆ ಎಂದು ಮನೋಹರ್ ಪರಿಕ್ಕರ್ ಪ್ರೇಕ್ಷಕರಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಬಹುತೇಕರು ಚಿತ್ರ ಅತ್ಯುತ್ತಮವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

4206 ಮಂದಿ ಪರಿಕ್ಕರ್ ಅವರ ಟ್ವಿಟರ್‍ಗೆ ರೀಟ್ವಿಟ್ ಮಾಡಿದರೆ 11,700 ಮಂದಿ ಲೈಕ್ ಮಾಡಿದ್ದಾರೆ.

ಪಣಜಿಯ ಮಾಂಡೋವಿಯಲ್ಲಿ ನಿರ್ಮಾಣ ಮಾಡಿರುವ ಅಟಲ್ ಸೇತು ಉದ್ಘಾಟಿಸಿದ ಬಳಿಕ ಪರಿಕ್ಕರ್ ನೇರವಾಗಿ ಮಾಲ್‍ಗೆ ತೆರಳಿ ತಮ್ಮ ಸಹೋದ್ಯೋಗಿಗಳ ಜೊತೆ ಚಿತ್ರ ವೀಕ್ಷಣೆ ಮಾಡಿದರು. ಕೆಲವರು ಟ್ವಿಟರ್‍ನಲ್ಲಿ ಆದಷ್ಟು ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ.

ಇನ್ನು ಕೆಲವರು ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಉರಿ ಚಿತ್ರಕ್ಕೆ ನನ್ನ ನಮಸ್ಕಾರ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ