ಶ್ರೀಗಳ ಕ್ರಿಯಾ ವಿಧಿಯ ಪೂರ್ವಸಿದ್ಧತೆಗಳನ್ನು ಖುದ್ದು ಪರಿಶೀಲಿಸಿದ ಡಿಸಿಎಂ

ತುಮಕೂರು, ಜ.22-ಶ್ರೀಗಳ ಅಂತಿಮ ಕ್ರಿಯಾ ವಿಧಿಯ ಪೂರ್ವಸಿದ್ಧತೆಗಳನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಶಾಸಕ ವಿ.ಸೋಮಣ್ಣ ಅವರು ಖುದ್ದಾಗಿ ಪರಿಶೀಲನೆ ನಡೆಸಿದರು.

ಇಂದು ಬೆಳಗ್ಗೆ ಮೂವರೂ ಗಣ್ಯರು, ಹಳೇ ಮಠದ ಉದ್ಧಾನ ಶ್ರೀಗಳ ಗದ್ದುಗೆ ಸಮೀಪದಲ್ಲೇ ಸಿದ್ದಗಂಗಾ ಶ್ರೀಗಳಿಗೂ ಕ್ರಿಯಾ ಸಮಾಧಿ ನಿರ್ಮಾಣಗೊಂಡಿದ್ದು, ಅದರ ಅಂತಿಮ ಹಂತದ ಸಿದ್ಧತೆಗಳನ್ನು ಪರಮೇಶ್ವರ್ ಮತ್ತು ಎಂ.ಬಿ.ಪಾಟೀಲ್ ಖುದ್ದು ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ್ ಅವರು, ಸಾಗರೋಪಾದಿಯಲ್ಲಿ ಭಕ್ತ ಸಾಗರ ಶ್ರೀಮಠಕ್ಕೆ ಆಗಮಿಸುತ್ತಿದ್ದು, ಎಲ್ಲರಿಗೂ ಶ್ರೀಗಳ ಅಂತಿಮ ದರ್ಶನ ಸಿಗುವಂತಹ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತೇವೆ. ಸಂಜೆ 4.30ಕ್ಕೆ ಅಂತಿಮ ಕ್ರಿಯಾವಿಧಿಯ ಮೆರವಣಿಗೆ ಆರಂಭಗೊಳ್ಳಬೇಕಿತ್ತು.ಆದರೆ ಜನರ ಬರುವಿಕೆಯ ಪ್ರಮಾಣ ಹೆಚ್ಚಾಗಿರುವುದರಿಂದ ಇದು ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಶ್ರೀಮಠದ ಭಕ್ತರೊಂದಿಗೆ ಪೊಲೀಸರು ಅತ್ಯಂತ ಸೌಜನ್ಯದಿಂದ ವರ್ತಿಸಬೇಕು.ದೂರದ ಊರುಗಳಿಂದ ಬಂದವರಿಗೆ ಮಾರ್ಗ ಮತ್ತು ಇತರ ಮಾಹಿತಿಗಳನ್ನು ನೀಡಿ ಸಹಕರಿಸಬೇಕು. ಭಕ್ತರಿಗೆ ಯಾವುದೇ ಕುಂದು-ಕೊರತೆಗಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಸಂಚಾರ ದಟ್ಟಣೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿರುವುದರಿಂದ ಅಂತಿಮ ಹಂತದಲ್ಲಿ ಒಂದಷ್ಟು ವಾಹನ ಮಾರ್ಗಗಳ ಬದಲಾವಣೆಗೆ ಗೃಹ ಸಚಿವ ಎಂ.ಬಿ.ಪಾಟೀಲ್ ಸೂಚನೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ