ಅಯಸ್ಕಾಂತೀಯ ಶಕ್ತಿ ಅನಂತ್‍ಕುಮಾರ್ ಅವರಲ್ಲಿತ್ತು: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ

ಬೆಂಗಳೂರು, ನ.12-ಕೇಂದ್ರ ಸಚಿವ ಅನಂತ್‍ಕುಮಾರ್ ಅವರು ಎಲ್ಲರ ಬಗ್ಗೆ ತೋರಿಸುತ್ತಿದ್ದ ಪ್ರೀತಿ, ವಿಶ್ವಾಸ ಅವಿಸ್ಮರಣೀಯ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.

ನನ್ನ ಪರಮಾಪ್ತ ಸ್ನೇಹಿತರಲ್ಲಿ ಒಬ್ಬರಾಗಿದ್ದ ಅನಂತ್‍ಕುಮಾರ್ ಅವರು ಅತ್ಯುತ್ತಮ ಸಂಸದೀಯ ಪಟು ಅಷ್ಟೇ ಅಲ್ಲ, ಅಭಿವೃದ್ಧಿಯ ಚಿಂತಕ ಕೂಡ ಆಗಿದ್ದರು. ಹಿರಿಯರ ಬಗ್ಗೆ ಅವರಿಗಿದ್ದ ಗೌರವ, ಪ್ರೀತಿ ಅನುಕರಣೀಯವಾಗಿತ್ತು. ಭಾಷೆ, ಪ್ರಾಂತ್ಯ, ಪಕ್ಷ, ಜಾತಿ ಮತ್ತು ಧರ್ಮದ ಗಡಿ ಇರಲಿಲ್ಲ. ಸಂಸತ್ತಿನೊಳಗೆ ಏರಿದ ಧ್ವನಿಯಲ್ಲಿ ಚರ್ಚೆ ನಡೆಸಿ ವಿರಾಮದ ವೇಳೆ ಹೊರ ಬಂದಾಗ ಅದೇಕೆ ಇಷ್ಟು ಸಿಟ್ಟು, ಇಷ್ಟು ಮುನಿಸು ಎಂದು ಹೇಳಿ ನಗೆ ಬೀರಿ ಮತ್ತೆ ತನ್ನತ್ತ ಸೆಳೆಯುತ್ತಿದ್ದ ಅಯಸ್ಕಾಂತೀಯ ಶಕ್ತಿ ಅನಂತ್‍ಕುಮಾರ್ ಅವರಲ್ಲಿತ್ತು ಎಂದು ಸ್ಮರಿಸಿದರು.
ಕರ್ನಾಟಕದ ವಿಷಯ ಬಂದಾಗ ಅವರು ತೋರುತ್ತಿದ್ದ ಕಳಕಳಿ, ಕಾಳಜಿ ಅನುಕರಣೀಯವಾಗಿತ್ತು ಎಂದು ಖರ್ಗೆ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ