ವಿಶೇಷ ಪ್ರವಾಸ ಪ್ಯಾಕೇಜ್

ಬೆಂಗಳೂರು, ಸೆ.27- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ವಿಶೇಷ ಪ್ರವಾಸ ಪ್ಯಾಕೇಜ್‍ಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ವರ್ಷದ ಜುಲೈ-ಆಗಸ್ಟ್ ತಿಂಗಳುಗಳಲ್ಲಿ ವಿಪರೀತ ಮಳೆ ಹಾಗೂ ಪ್ರವಾಹದಿಂದಾಗಿ ನಲುಗಿ ಹೋಗಿದ್ದ ಕೇರಳ ರಾಜ್ಯದ ಜಗತ್ ಪ್ರಸಿದ್ಧ ಪ್ರವಾಸಿ ತಾಣಗಳು ಮತ್ತು ರಾಜ್ಯದ ಕೂರ್ಗ್ ಭಾಗವು ಪುನಃ ಪ್ರವಾಸಿಗರನ್ನು ಆಕರ್ಷಿಸುವತ್ತ ಯಶಸ್ವಿಯಾಗಿದೆ. ಈಗಾಗಲೇ ಪ್ರವಾಸಿಗರು ಈ ಪ್ರಸಿದ್ಧ ಸ್ಥಳಗಳ ವೀಕ್ಷಣೆಗೆ ಆಗಸ್ಟ್ 29ರಿಂದಲೇ ಬರಲು ಪ್ರಾರಂಭಿಸಿದ್ದು, ಪ್ರವಾಹದಿಂದಾಗಿ ಈ ಸ್ಥಳಗಳಲ್ಲಿ ನಲುಗಿ ಹೋಗಿದ್ದ ಪ್ರವಾಸೋದ್ಯಮವು ಪುನಃ ಪುಟಿದೇಳಲು ಪ್ರಾರಂಭಿಸಿದೆ.

ಈಗಾಗಲೇ ನಿಗದಿಯಾದಂತೆ ಇಂದಿನಿಂದ ಇದೆ 30ರವರೆಗೆ ಕೇರಳ ರಾಜ್ಯ ಟ್ರಾವೆಲ್ಸ್ ಮಾರ್ಟ್ ನಡೆಯಲಿದ್ದು, ಕೇರಳ ರಾಜ್ಯದ ಎಲ್ಲಾ ಪ್ರವಾಸಿ ಸ್ಥಳಗಳು ಹಾಗೂ ಹೋಟೆಲ್‍ಗಳು ಪ್ರವಾಸಿಗರಿಂದ ಆಕರ್ಷಿತಗೊಳ್ಳುತ್ತಿದ್ದು, ಬಸ್ ಹಾಗೂ ಟ್ಯಾಕ್ಸಿ ಆಚರಣೆ ಪ್ರಾರಂಭವಾಗಿರುತ್ತವೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ರಾಜ್ಯ ಪ್ರವಾಸೋದ್ಯಮ ನಿಗಮ ವಿಶೇಷ ಪ್ರವಾಸ ಪ್ಯಾಕೇಜ್‍ಗಳನ್ನು ಹಮ್ಮಿಕೊಂಡಿದೆ.

ಮುನ್ನಾರ್-ತೇಕ್ಕಡಿ-ಅಲೆಪ್ಪಿ (ಬ್ಯಾಕ್ ವಾಟರ್ ಪ್ರವಾಸ) 6 ದಿನಗಳ ಪ್ರವಾಸ, ಪ್ರತಿ ಬುಧವಾರ ಸಂಜೆ 7 ಗಂಟೆಗೆ ಹೊರಡಲಿದ್ದು, ಸೋಮವಾರ ಬೆಳಗ್ಗೆ 6 ಗಂಟೆಗೆ ತಲುಪಲಿದೆ. ಹವಾನಿಯಂತ್ರಿತ ಡಿಲಕ್ಸ್ ಬಸ್‍ನಲ್ಲಿ ಹೋಗುವ ಈ ಪ್ರವಾಸಕ್ಕೆ 9599 ರೂ.ನಿಗದಿಪಡಿಸಲಾಗಿದೆ.
ಮೈಸೂರು-ಊಟಿ-ದೊಡ್ಡಬೆಟ್ಟ-ಕೊಡೈಕೆನಲ್‍ಗೆ 5 ದಿನಗಳ ಪ್ರವಾಸ ಪ್ರತಿ ಸೋಮವಾರ ಮತ್ತು ಗುರುವಾರ ಬೆಳಗ್ಗೆ 6.30ಕ್ಕೆ ಹೊರಡಲಿದೆ. ಇದಕ್ಕೆ 6999 ರೂ. ನಿಗದಿಪಡಿಸಲಾಗಿದೆ.

ಮಡಿಕೇರಿ-ಭಾಗಮಂಡಲ- ತಲಕಾವೇರಿಗೆ 2 ದಿನಗಳ ಪ್ರವಾಸ ಪ್ರತಿ ಶುಕ್ರವಾರ ಮತ್ತು ಶನಿವಾರ ಬೆಳಗ್ಗೆ 6.30ಕ್ಕೆ ಹೊರಡಲಿದ್ದು, 2999 ರೂ. ನಿಗದಿಪಡಿಸಲಾಗಿದೆ. ಮೈಸೂರು-ಊಟಿ-ದೊಡ್ಡಬೆಟ್ಟಿದ 3 ದಿನಗಳ ಪ್ರವಾಸ ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಗ್ಗೆ 6.30ಕ್ಕೆ ಹೊರಡಲಿದ್ದು, 2999 ರೂ.ನಿಗದಿಪಡಿಸಲಾಗಿದೆ.

ಈ ಪ್ರವಾಸಗಳು ಬೆಂಗಳೂರಿನ ಯಶವಂತಪುರದಿಂದ ಆರಂಭಗೊಳ್ಳಲಿದ್ದು, ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ನಿಗಮದ ಬುಕ್ಕಿಂಗ್ ಕೌಂಟರ್‍ಗಳು ಕೆ.ಎಸ್.ಆರ್.ಟಿ.ಸಿ ಅವತಾರ್ ಪೆÇೀರ್ಟಲ್ ಹಾಗೂ ರೆಡ್‍ಬಸ್ ಪೆÇೀರ್ಟಲ್ ಮುಖಾಂತರ ಮಾಡಬಹುದು. ಪ್ರವಾಸದ ಬುಕ್ಕಿಂಗ್‍ಗಾಗಿ ಯಶವಂತಪುರದಲ್ಲಿರುವ ಪ್ರಧಾನ ಬುಕ್ಕಿಂಗ್ ಕೇಂದ್ರವನ್ನು ಹಾಗೂ ಕೆಂಪೇಗೌಡ ಬಸ್‍ನಿಲ್ದಾಣದಲ್ಲಿನ ನಿಗಮದ ಕೌಂಟರ್‍ನ್ನು ಸಂಪರ್ಕಿಸಬಹುದು. ನಿಗಮದ ಅಧಿಕೃತ ಏಜೆಂಟ್ ಮುಖಾಂತರ ಬುಕ್ಕಿಂಗ್ ಮಾಡಬಹುದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 080-4334 4334/35, 8970650070, 8970650075 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕರಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ