ತುಮಕೂರು:ಪಟ್ಟಣ ಪಂಚಾಯತಿ ಚುನಾವಣೆ ಸಮೀಪಿಸುತ್ತಿದ್ದು, ಕೊರಟಗೆರೆಯ ಸ್ಥಳೀಯ ನಾಯಕರು ಚುನಾವಣೆಯಲ್ಲಿ ಪಕ್ಷ ಗೆಲ್ಲುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಉಪಮುಖ್ಯಮಂತ್ರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ.
ಕೊರಟಗೆರೆ ಕ್ಷೇತ್ರದಲ್ಲಿ ಪಟ್ಟಣ ಪಂಚಾಯಿತಿ ಚುನಾವಣಾ ತಯಾರಿ ಕುರಿತು ಸ್ಥಳೀಯ ನಾಯಕರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.
ವಿಧಾನಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರದ ನಾಯಕರು,ಮುಖಂಡರು, ಪ್ರತಿಯೊಬ್ಬರೂ ದೊಡ್ಡ ಮಟ್ಟದ ಗೆಲುವಿಗೆ ಸಾಕಷ್ಟು ಶ್ರಮಿಸಿದ್ದೀರಾ. ಈಗ ಸ್ಥಳೀಯ ಚುನಾವಣೆ ಬರುತ್ತಿದ್ದು, ಎಲ್ಲರೂ ಇಂದಿನಿಂದಲೇ ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಳ್ಳಿ ಎಂದರು.
ತಮಗೆ ಟಿಕೆಟ್ ಸಿಗಲಿಲ್ಲ ಎಂಬ ಬೇಸರ ಯಾರಿಗೂ ಬೇಡ. ಎಲ್ಲರಿಗೂ ಪಕ್ಷ ಒಂದಲ್ಲಾ ಒಂದು ಜವಾಬ್ಧಾರಿ ನೀಡುತ್ತದೆ. ಹೀಗಾಗಿ ಟಿಕೆಟ್ ನಿರಾಶೆಯಿಂದ ಬೇಸರಕ್ಕೊಳಗಾಗದೇ ಚುನಾವಣೆಗೆ ಒಗ್ಗಟ್ಟಿನಿಂದ ಪ್ರಚಾರ ಕಾರ್ಯ ಮಾಡುವಂತೆ ಸಲಹೆನೀಡಿದರು.
ಪ್ರತಿಯೊಬ್ಬ ಕಾರ್ಯಕರ್ತರು ಮತದಾರರು ಮನೆ ಮನೆಗೆ ತೆರಳಿ ಮನವೊಲಿಸುವ ಕೆಲಸ ಮಾಡಬೇಕು. ೧೫ ಸ್ಥಾನದಲ್ಲೂ ನಾವೇ ಗೆಲುವು ಸಾಧಿಸಬೇಕು. ಹೀಗಾಗಿ ಇಂದಿನಿಂದಲೇ ಚುರುಕಾಗಿ ಚುನಾವಣಾ ಕೆಲಸ ಶುರುವಿಟ್ಟುಕೊಳ್ಳುವಂತೆ ಹೇಳಿದರು.
ಸಭೆಯಲ್ಲಿ ಮಾಜಿಸಚಿವರಾದ ಎಚ್.ಕೆ. ಪಾಟೀಲ್ ಹಾಗೂ ಟಿ.ಬಿ. ಜಯಚಂದ್ರ ಪಾಲ್ಗೊಂಡಿದ್ದರು.